ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇಂಧನ ಉಳಿತಾಯ, ಸಂಚಾರ ದಟ್ಟಣೆ ನಿಯಂತ್ರಣ ಮತ್ತು ಮಾಲಿನ್ಯ ಕಡಿತಗೊಳಿಸುವ ಉದ್ದೇಶದಿಂದ ಬೃಹತ್ ಆದೇಶವೊಂದನ್ನು ಹೊರಡಿಸಿದ್ದಾರೆ. ‌ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಸಂರಕ್ಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟು ದೆಹಲಿ ಸರಕಾರವು ʼಮೇರಾ ಭಾರತ್, ಮೇರಾ ಯೋಗ್ದಾನ್ʼ ಅಭಿಯಾನದ ಅಡಿಯಲ್ಲಿ ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಏಪ್ರಿಲ್‌ನಲ್ಲಿ ಪ್ರಾರಂಭ

ಪ್ರತಿ ಸೋಮವಾರವನ್ನು 'ಮೆಟ್ರೋ ಮಂಡೇ' ಎಂದು ಘೋಷಿಸಲಾಗಿದ್ದು, ಮುಖ್ಯಮಂತ್ರಿ, ಸಚಿವರು ಮತ್ತು ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಮೆಟ್ರೋ ಮೂಲಕವೇ ಕಚೇರಿಗೆ ಬರಲಿದ್ದಾರೆ.

ಸರಕಾರಿ ಅಧಿಕಾರಿಗಳ ಮಾಸಿಕ ಇಂಧನ ಮಿತಿಯನ್ನು ಶೇ. 20ರಷ್ಟು ಕಡಿತಗೊಳಿಸಲಾಗಿದೆ. ಮುಂದಿನ 6 ತಿಂಗಳವರೆಗೆ ಯಾವುದೇ ಹೊಸ ಇಂಧನ ಚಾಲಿತ ವಾಹನಗಳ ಖರೀದಿಯನ್ನು ನಿರ್ಬಂಧಿಸಲಾಗಿದೆ. ಸಿಎಂ ಕೂಡ ತಮ್ಮ ಭದ್ರತಾ ವಾಹನಗಳ ಸಂಖ್ಯೆಯನ್ನು ಶೇ. 60ರಷ್ಟು ಕಡಿತಗೊಳಿಸಿದ್ದಾರೆ.

ದೆಹಲಿ ಸರಕಾರದ ಯಾವುದೇ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಮುಂದಿನ 12 ತಿಂಗಳವರೆಗೆ ಯಾವುದೇ ಅಧಿಕೃತ ವಿದೇಶಿ ಪ್ರವಾಸ ಕೈಗೊಳ್ಳುವಂತಿಲ್ಲ. ಈಗಾಗಲೇ ನಿಗದಿಯಾಗಿದ್ದ ಹಲವು ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ.

ದೆಹಲಿಯ ನಾಗರಿಕರು ವಾರದಲ್ಲಿ ಒಂದು ದಿನ ಸ್ವಯಂಪ್ರೇರಿತರಾಗಿ 'ನೋ ವೆಹಿಕಲ್ ಡೇ' ಆಚರಿಸಿ, ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಲಾಗಿದೆ. ವಿದೇಶಿ ಪ್ರವಾಸಗಳನ್ನು ತಪ್ಪಿಸಲು ಪ್ರಕಟಿಸಿರುವ ಈ ಯೋಜನೆಯ ಭಾಗವಾಗಿ, ದೇಶದ ಜನರನ್ನು ದೆಹಲಿಗೆ ಆಕರ್ಷಿಸಲು ವಿಶೇಷ 'ಡೊಮೆಸ್ಟಿಕ್ ಟೂರಿಸಂ' ಯೋಜನೆಗಳನ್ನು ತರಲಾಗುತ್ತಿದೆ.