ʼಪ್ರವಾಸಿ ಪ್ರಪಂಚʼ ಪತ್ರಿಕೆ ಯಶಸ್ಸು ಪಡೆಯುವುದರಲ್ಲಿ ಸಂದೇಹವಿಲ್ಲ; ವಿಜಯ ಸಂಕೇಶ್ವರ
ಪ್ರವಾಸಿ ಪ್ರಪಂಚ ಪತ್ರಿಕೆ ಮೊದಲ ಸಂಚಿಕೆಯಲ್ಲಿಯೇ ಅತ್ಯಂತ ಸೊಗಸಾಗಿ ಮೂಡಿ ಬಂದಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಯನ್ನು ಹೀಗೂ ರೂಪಿಸಬಹುದಾ ಎಂದು ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಪತ್ರಿಕೆ ಆಕರ್ಷಕವಾಗಿದೆ. ಪತ್ರಿಕೆಯ ಮುದ್ರಣ, ವಿನ್ಯಾಸ ಮತ್ತು ಹೂರಣ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನ್ವಯವಾಗುವ ರೀತಿಯಲ್ಲಿದೆ.
ಬೆಂಗಳೂರು: ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಮೀಸಲಾದ ‘ಪ್ರವಾಸಿ ಪ್ರಪಂಚ’ ಎಂಬ ವಿನೂತನ ಪತ್ರಿಕೆಯನ್ನು ರೂಪಿಸಿದ ವಿಶ್ವೇಶ್ವರ ಭಟ್ ಅವರ ಪ್ರಯತ್ನವನ್ನು ಉದ್ಯಮಿ ವಿಜಯ ಸಂಕೇಶ್ವರ ಅವರು ಶ್ಲಾಘಿಸಿದ್ದಾರೆ. ನಗರದಲ್ಲಿರುವ ವಿಶ್ವವಾಣಿ ಪತ್ರಿಕಾ ಕಚೇರಿಗೆ ಗುರು ವಾರ ಭೇಟಿ ನೀಡಿದ ಸಂಕೇಶ್ವರ ದಂಪತಿ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರನ್ನು ಸನ್ಮಾನಿಸಿ, ಪ್ರವಾಸೋದ್ಯಮ ಮತ್ತು ಹೊಟೇಲ್ ಉದ್ಯಮ ವ್ಯಾಪಕವಾಗಿ ಬೆಳೆದಿದೆ.
ಈ ದಿನಗಳಲ್ಲಿ ಎಲ್ಲ ವಯೋಮಾನದ ಜನರೂ ಪ್ರವಾಸೋದ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಈ ಕ್ಷೇತ್ರಕ್ಕಾಗಿ ಮೀಸಲಾದ ಪತ್ರಿಕೆ ಕೇವಲ ಕನ್ನಡದಲ್ಲಿ ಅಲ್ಲ, ಭಾರತದ ಇತರ ಭಾಷೆಗಳಲ್ಲೂ ಇಲ್ಲ. ಕನ್ನಡದಲ್ಲಿ ಇಂಥ ಪ್ರಯೋಗ ಮಾಡಿದ ಭಟ್ ಅವರ ಸಾಹಸವನ್ನು ನಾನು ಮೆಚ್ಚುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದು ಹೇಳಿದರು.
ಪ್ರವಾಸಿ ಪ್ರಪಂಚ ಪತ್ರಿಕೆ ಮೊದಲ ಸಂಚಿಕೆಯಲ್ಲಿಯೇ ಅತ್ಯಂತ ಸೊಗಸಾಗಿ ಮೂಡಿ ಬಂದಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಯನ್ನು ಹೀಗೂ ರೂಪಿಸಬಹುದಾ ಎಂದು ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಪತ್ರಿಕೆ ಆಕರ್ಷಕವಾಗಿದೆ. ಪತ್ರಿಕೆಯ ಮುದ್ರಣ, ವಿನ್ಯಾಸ ಮತ್ತು ಹೂರಣ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನ್ವಯವಾಗುವ ರೀತಿಯಲ್ಲಿದೆ. ಇಂಥ ಪತ್ರಿಕೆಯೊಂದರ ಅಗತ್ಯವಿತ್ತು. ಅದನ್ನು ವಿಶ್ವೇಶ್ವರ ಭಟ್ ಅವರು ನೀಗಿಸಿದ್ದಾರೆ ಎಂದು ಸಂಕೇಶ್ವರ ಅಭಿಪ್ರಾಯಪಟ್ಟರು.

ಪ್ರವಾಸಿ ಪ್ರಪಂಚ ಪತ್ರಿಕೆ ಯಶಸ್ಸನ್ನು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದೇ ಒಂದು ಸವಾಲು. ಹೀಗಿರುವಾಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನ್ವಯವಾಗುವ ಒಂದು ಪತ್ರಿಕೆಯನ್ನು ನಡೆಸುವುದು ಸಾಹಸವೇ ಸರಿ. ಭಟ್ ಅವರ ಈ ಪ್ರಯತ್ನವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಹರಸುತ್ತೇನೆ.
-ವಿಜಯ ಸಂಕೇಶ್ವರ, ಉದ್ಯಮಿ