Sunday, June 21, 2026
Sunday, June 21, 2026

ಯೋಗ: ಲೋಕಹಿತಾರ್ಥಾಯ

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಯೋಗ ಎಂದರೆ ಕೇವಲ ಉಸಿರಾಟವಲ್ಲ. ಯೋಗ ಎಂದರೆ ಕೇವಲ ಅಂಗಾಂಗ ಚಲನೆ ಅಲ್ಲ. ದೇಹ ಮತ್ತು ಮನಸ್ಸುಗಳನ್ನು ನಿಯಂತ್ರಿಸುವುದಕ್ಕೆ ಒಂದು ಸಾಧನ ಯೋಗ. ಮನುಷ್ಯನಿಗೆ ಬರುವ ರೋಗ ದೈಹಿಕ ಮತ್ತು ಮಾನಸಿಕ ಎಂದು ಎರಡು ವಿಧ. ಯೋಗವು ದೈಹಿಕವಾದ ರೋಗಗಳಿಗೂ ಉತ್ತಮ ಉಪಾಯ ಮತ್ತು ಮಾನಸಿಕ ರೋಗಗಳ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಎನ್ನುತ್ತಾರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ. ಡಿ. ವೀರೇಂದ್ರ ಹೆಗ್ಗಡೆ.

ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

--

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ.

ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ. ಅಂದರೆ ಇಡೀ ಪ್ರಪಂಚಕ್ಕೆ ಮಾರ್ಗದರ್ಶನವನ್ನು ನೀಡಬಹುದಾದ ಜ್ಞಾನ ಸಾಮ್ರಾಜ್ಯ ದೇಶ ಭಾರತ ದೇಶವಾಗಿತ್ತು. ನೂರಾರು ವೈಜ್ಞಾನಿಕ ವಿದ್ಯಾವೈವಿಧ್ಯಗಳಲ್ಲಿ ಇಂದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಮತ್ತು ಪ್ರತಿಯೊಬ್ಬ ಮನುಷ್ಯನ ತುರ್ತು ಅವಶ್ಯಕತೆಯಾದ ಯೋಗ ವಿದ್ಯೆಯು ಒಂದು. ವೇದಕಾಲದಿಂದ ಈ ಯೋಗದ ಅಧ್ಯಯನ-ಅಧ್ಯಾಪನ ಇಲ್ಲಿ ನಡೆಯುತ್ತಿರುವುದನ್ನು ನಾವು ಗ್ರಂಥಗಳಲ್ಲಿ ನೋಡುತ್ತೇವೆ. ಪತಂಜಲಿ ಮೊದಲಾದ ಮಹರ್ಷಿಗಳು ಯೋಗವನ್ನು ಕುರಿತು ಪ್ರೌಢವಾದ ಯೋಗ ಸೂತ್ರವನ್ನು ರಚಿಸಬೇಕಾದರೆ ತತ್ ಪೂರ್ವದಲ್ಲಿ ಯೋಗಶಾಸ್ತ್ರ ಪ್ರಾಶಸ್ತ್ಯವನ್ನು ಪಡೆದು ಪ್ರವರ್ಧಮಾನಕ್ಕೆ ಬಂದಿತ್ತು ಎಂಬುದನ್ನು ನಾವು ತಿಳಿಯಬಹುದು. ಇಂಥ ಯೋಗ ವಿಷಯದ ಉಲ್ಲೇಖಗಳನ್ನು ಅನೇಕ ಗ್ರಂಥಗಳಲ್ಲಿ ಕಾಣುತ್ತೇವೆ. ʻಯೋಗಃ ಕರ್ಮಸು ಕೌಶಲಮ್ʼ ಎಂಬುದು ಭಗವದ್ಗೀತೆಯಲ್ಲಿ ಬಂದ ಮಾತು. ʻಯೋಗಃ ಚಿತ್ತ ವೃತ್ತಿ ನಿರೋಧಃʼ ಇದು ಪತಂಜಲ ಯೋಗಸೂತ್ರ. ವಿಶೇಷವಾಗಿ ನಮ್ಮ ದೇಶದಲ್ಲಿ ಶಾಸ್ತ್ರ ಪರಂಪರೆಯಲ್ಲಿ ಮಾತ್ರ ಅಧ್ಯಯನ ಅಧ್ಯಾಪನ ಮಾರ್ಗದಲ್ಲಿ ಪ್ರಚಲಿತವಿದ್ದ ಈ ಯೋಗಕ್ಕೆ ಯೋಗ ಬಂದಿದ್ದು 2014ರಲ್ಲಿ. ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜಿ ಯವರು ವಿಶ್ವಸಂಸ್ಥೆಯಲ್ಲಿ ಯೋಗದ ಕುರಿತು ಆಡಿದ ಮಾತು ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿತು. ಈ ಪ್ರಾಯೋಗಿಕ ಶಾಸ್ತ್ರ ಪ್ರತಿಯೊಬ್ಬ ಮನುಷ್ಯನಿಗೂ ಬೇಕಾದುದರಿಂದಲೇ ಇದು ವಿಶ್ವಮಾನ್ಯವಾಯಿತು.

ಇದನ್ನೂ ಓದಿ: ಕ್ಷೇಮವನ: ಸಾಧಕರ ಪಾಲಿನ ಆಕರ್ಷಕ ಆರೋಗ್ಯಧಾಮ

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಯೋಗ ಎಂದರೆ ಕೇವಲ ಉಸಿರಾಟವಲ್ಲ. ಯೋಗ ಎಂದರೆ ಕೇವಲ ಅಂಗಾಂಗ ಚಲನೆ ಅಲ್ಲ. ದೇಹ ಮತ್ತು ಮನಸ್ಸುಗಳನ್ನು ನಿಯಂತ್ರಿಸುವುದಕ್ಕೆ ಒಂದು ಸಾಧನ ಯೋಗ. ಮನುಷ್ಯನಿಗೆ ಬರುವ ರೋಗ ದೈಹಿಕ ಮತ್ತು ಮಾನಸಿಕ ಎಂದು ಎರಡು ವಿಧ. ಯೋಗವು ದೈಹಿಕವಾದ ರೋಗಗಳಿಗೂ ಉತ್ತಮ ಉಪಾಯ ಮತ್ತು ಮಾನಸಿಕ ರೋಗಗಳ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ. ನಮ್ಮ ಹೆಚ್ಚಿನ ರೋಗಗಳು ಮನೋ ಮೂಲದ ರೋಗಗಳೇ ಆಗಿವೆ. ಇದರ ಉಪಶಮನ ಎಂಬುದು ಮನೋನಿಯಂತ್ರಣದಿಂದಲೇ ಸಾಧ್ಯ. ಯೋಗವು ಮನೋನಿಯಂತ್ರಣ, ಮನಸ್ಸಿನ ಉಪಶಮನ ಮಾಡುವುದರಿಂದ ಇವತ್ತು ನಮಗೆಲ್ಲಾ ಅನಿವಾರ್ಯವಾಗಿ ಬಳಕೆಯಲ್ಲಿದೆ. ಇಂತಹ ಒಂದು ಅದ್ಭುತವಾದ ವಿದ್ಯೆಯನ್ನು ನೀಡಿದ ದೇಶದಲ್ಲಿ ನಾವೆಲ್ಲರೂ ಇದ್ದೇವೆ ಎಂಬುದೇ ಒಂದು ಹೆಮ್ಮೆಯ ಸಂಗತಿ.

Untitled design (30)

1986ರಲ್ಲಿ ಅಮೇರಿಕಾದಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿರುವುದನ್ನು ಕಂಡು ನಾನು ಬೆರಗಾದೆ. ಅವರು ವಿಶೇಷವಾಗಿ ಯೋಗವು ಬೊಜ್ಜು ಕರಗಿಸುವುದಕ್ಕಾಗಿ ಮಾತ್ರ ಎಂದು ಬಗೆದಿದ್ದರು. ಅವರು ಯೋಗವೆಂದರೆ ಕೇವಲ ವ್ಯಾಯಾಮವೆಂದೂ ತಿಳಿದುಕೊಂಡಿದ್ದರು.

ಯೋಗ ಧ್ಯಾನ ಎಂಬುದು ನಮ್ಮ ಮನಸ್ಸಿಗೆ ನೆಮ್ಮದಿಯನ್ನು, ದೈಹಿಕವಾಗಿ ಚುರುಕುತನವನ್ನು ನೀಡುತ್ತಿರುವುದನ್ನು ಗಮನಿಸಿ 1989ರಲ್ಲಿ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜನ್ನು ಪ್ರಾರಂಭ ಮಾಡಲಾಯಿತು. ಈ ವಿಷಯ ಹೆಚ್ಚು ಪ್ರಚಲಿತದಲ್ಲಿ ಇಲ್ಲದಿರುವುದರಿಂದ ಆರಂಭದಲ್ಲಿ ಕೇವಲ 15 ವಿದ್ಯಾರ್ಥಿಗಳು ದಾಖಲಾದರು. ಆದರೆ ಇಂದು 120 ಪದವಿ ವಿದ್ಯಾರ್ಥಿಗಳು ಹಾಗೂ 20 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸೇರ್ಪಡೆಗೆ ಇಲ್ಲಿ ಅವಕಾಶವಿದೆ. ಇಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ತರಬೇತುಗೊಂಡ ವೈದ್ಯರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ʻಪ್ರಿನ್ಸಿಪಲ್ಸ್ ಆಫ್ ಯೋಗ ಥೆರಪಿʼ, ʻಯೋಗ ಫೀಲಾಸಫಿʼ,ʻಪ್ರಾಕ್ಟೀಸಸ್ ಆಫ್ ಯೋಗ ಅಂಡ್ ಡ್ರಗ್ ಲೆಸ್ ಥೆರಪಿʼ ಇತ್ಯಾದಿಗಳನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಸರಕಾರದ ನಿಯಮದಂತೆ ಮಾನ್ಯತೆ ಪಡೆದು ನೀಡಲಾಗುತ್ತಿದೆ. ಇಲ್ಲಿ ವಿಶೇಷವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆ ಇರುವ ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ಮೂಲಕ ಸಾಬೀತು ಪಡಿಸುವ ಕಾರ್ಯಗಳು ನಡೆಯುತ್ತಿವೆ. ಕೌಶಲಯುತ ತಜ್ಞವೈದ್ಯರನ್ನು ನಿರೂಪಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಆಯುಷ್ ಸಚಿವಾಲಯ ದೇಶದಲ್ಲೇ ಪ್ರಥಮವಾಗಿ ಉಜಿರೆಯಲ್ಲಿರುವ ಎಸ್‌ಡಿಎಂ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿಗೆ ʻಉತ್ಕೃಷ್ಟ ಪ್ರಗತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಶೋಧನ ಕೇಂದ್ರʼವನ್ನು ಮಂಜೂರು ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳು ಯೋಗದ ರಾಯಭಾರಿಗಳಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.

Untitled design (31)

ʻಶರೀರಂ ಆದ್ಯಂ ಖಲು ಧರ್ಮ ಸಾಧನಮ್ʼ ಎಂಬ ಮಾತಿನಂತೆ ಶರೀರವನ್ನು ಉತ್ತಮವಾಗಿ ಇಟ್ಟುಕೊಂಡಾಗ ಮಾತ್ರ ಈ ಶರೀರದಿಂದ ಉನ್ನತ ಸಾಧನೆಯನ್ನು ಮಾಡಲು ಸಾಧ್ಯ. ಶರೀರವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕಾದರೆ ಆಸನ ಪ್ರಾಣಾಯಾಮಗಳನ್ನು ಮಾಡಬೇಕು. ರೋಗರುಜಿನಗಳು ಬರದಂತೆ ತಡೆಯಲು ಸಾತ್ವಿಕ ಆಹಾರವನ್ನು ಸೇವಿಸಬೇಕು. ಮನೋವಿಕಾರಗಳನ್ನು ತಡೆಯುವುವುದಕ್ಕೆ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಬೇಕು. ಮನಸ್ಸಿನ ಸ್ವಭಾವ ಚಾಂಚಲ್ಯ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸದಿದ್ದರೆ ನಮ್ಮ ಆಲೋಚನೆಗಳು ವಿಕೃತವಾಗುತ್ತವೆ. ದೇಹವು ರೋಗಕ್ಕೆ ಕಾರಣವಾಗಿ ಬಿಡುತ್ತದೆ. ಆದ್ದರಿಂದ ನಾವು ಪ್ರತಿನಿತ್ಯ ಯೋಗವನ್ನು ಅನುಷ್ಠಾನ ಮಾಡಬೇಕು. ನಿಯಮಿತವಾದ ವ್ಯಾಯಾಮ, ಸಾತ್ವಿಕವಾದ ದಿನಚರ್ಯೆ ಮತ್ತು ಉತ್ತಮ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ನಮ್ಮ ಪ್ರಾಚೀನ ಋಷಿ-ಮುನಿಗಳು ಇಂಥ ಜೀವನ ಕ್ರಮವನ್ನು ಅನುಸರಿಸಿರುವುದರಿಂದಲೇ ಉತ್ತಮವಾದ ವಿಚಾರಧಾರೆಯನ್ನು ನಮಗೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಕೃತಿಯಲ್ಲಿದೆ ನಿಮ್ಮ ಆರೋಗ್ಯ

ವಿಶ್ವ ಯೋಗ ದಿನ, ವರ್ಷದಲ್ಲಿ ಒಂದು ದಿನ ಈ ಸಂಭ್ರಮಾಚರಣೆಯನ್ನು ಮಾಡುತ್ತೇವೆ. ಆದರೆ ಯೋಗ ಎಂಬುದು ನಮ್ಮ ದಿನಚರಿಯಾಗಬೇಕು. ಬಾಲ್ಯದಲ್ಲಿ ನಾವು ಹೇಳಿದಂತೆ ದೇಹ ಬಗ್ಗುತ್ತದೆ. ಆದ್ದರಿಂದ ಎಳೆಯ ಮಕ್ಕಳಿರುವಾಗಲೇ ವ್ಯಾಯಾಮಗಳನ್ನ, ಆಸನಗಳನ್ನು ಕಲಿಸಬೇಕು. ಆನಂತರ ಪ್ರಮುಖವಾದ ಉಸಿರಾಟದ ನಿಯಂತ್ರಣ ರೂಪವಾದ ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಆಹಾರ ಕ್ರಮವನ್ನು ಬಾಲ್ಯದಿಂದಲೇ ರೂಢಿ ಮಾಡಿಕೊಳ್ಳಬೇಕು.ನಮ್ಮ ಭಾರತೀಯ ಜ್ಞಾನಪರಂಪರೆಯನ್ನು ಸರಿಯಾಗಿ ಅರಿತು ಅಳವಡಿಸಿಕೊಂಡಾಗ ನಮಗೂ ನಮ್ಮ ಸಮಾಜಕ್ಕೂ ಮತ್ತು ಸಮಗ್ರ ಮನುಕುಲಕ್ಕೂ ಓಳಿತಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಎಲ್ಲರಿಗೂ ಯೋಗದಿನದ ಶುಭಾಶಯಗಳು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!