Wednesday, March 18, 2026
Wednesday, March 18, 2026

ಸೀತೆಯ ಮಡಿಲಲ್ಲಿ ಆʼರಾಮʼವ ಹುಡುಕುತ್ತಾ!

ಮುಂದಿನ ಬಾರಿ ಸೋಮೇಶ್ವರಕ್ಕೆ ಹೋದಾಗ ಸುಲೋಚನೆಯನ್ನು ಹುಡುಕಬೇಡಿ. ಜೆಎಲ್‌ಆರ್‌ನ್ನು ಹುಡುಕಿ. ಪಶ್ಚಿಮ ಘಟ್ಟಗಳ ಹಸಿರಿನ ಹೊದಿಕೆಯಲ್ಲಿ ಅಡಗಿರುವ ಸೀತಾನದಿ ನೇಚರ್‌ ಕ್ಯಾಂಪ್‌, ನಿಸರ್ಗದ ಜತೆ ನಿಮ್ಮನ್ನು ಕನೆಕ್ಟ್‌ ಮಾಡುತ್ತದೆ. ಉಡುಪಿಯಿಂದ 40 ಕಿಮೀ ದೂರದಲ್ಲಿರುವ ಹೆಬ್ರಿಗೆ ಸಮೀಪದ ಈ ಸ್ಥಳ ಸೋಮೇಶ್ವರ ಅಭಯಾರಣ್ಯದ ಮಡಿಲಲ್ಲಿದೆ. ಇದು ನಿಸರ್ಗದ ಹಲವಾರು ಮಜಲುಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ. ನೀವು ನಿಸರ್ಗ ಪ್ರಿಯರಾಗಿದ್ದರೆ, ವನ್ಯಜೀವಿಗಳನ್ನು ಇಷ್ಟ ಪಡುವವರಿದ್ದರೆ ಅಥವಾ ಆರಾಮವಾಗಿ ರೆಸ್ಟ್‌ ಮಾಡುವವರಿದ್ದರೆ ಈ ಕ್ಯಾಂಪ್‌ ನಿಮ್ಮಂಥವರಿಗೆ!

ಕರ್ನಾಟಕದಲ್ಲಿ ಕೃಷ್ಣನನ್ನು ನೆನೆಸಿದರೆ ಅಥವಾ ಕೃಷ್ಣನನ್ನು ನೋಡಬೇಕು ಎಂದನಿಸಿದರೆ, ಮೊದಲು ನೆನಪಾಗುವುದು ಉಡುಪಿ. ಆದರೆ ಉಡುಪಿ ಅಂದ್ರೆ ಕೇವಲ ಕೃಷ್ಣಮಠವಲ್ಲ. ಅದನ್ನು ಹೊರತುಪಡಿಸಿಯೂ ಉಡುಪಿಯಲ್ಲಿ ನೋಡಲು ಹಲವಾರು ಸ್ಥಳಗಳಿವೆ. ಬೀಚ್‌ಗಳು, ಹೊಟೇಲ್‌ಗಳು, ಸೇಂಟ್‌ ಮೇರಿಸ್ ಐಲ್ಯಾಂಡ್‌ ಹೀಗೆ ಪಟ್ಟಿ ಮಾಡುತ್ತ ಹೋದರೆ, ಭೂತಾಯಿಯು ತನ್ನ ಮುದ್ದು ಮಗಳಿಗೆ ಅಲಂಕಾರ ಮಾಡಿದಷ್ಟು ಸೊಬಗನ್ನು ಉಡುಪಿ ಹೊಂದಿದೆ. ಅಂಥದ್ದರಲ್ಲಿ ಒಂದು, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ. ಇಲ್ಲಿನ ಪ್ರಮುಖವಾದ ಸೋಮೇಶ್ವರ ದೇವಸ್ಥಾನದಿಂದ ಹೆಸರು ಪಡೆದುಕೊಂಡಿರುವ ಈ ಅಭಯಾರಣ್ಯ, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಬರುತ್ತದೆ. ಹೆಚ್ಚೂ ಕಡಿಮೆ 314 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಈ ಸ್ಥಳ, ಹಲವಾರು ಪ್ರಾಣಿ-ಪಕ್ಷಿ, ಗಿಡ ಮರಗಳ ಸಂಕುಲಗಳಿಗೆ ಮನೆಯಾಗಿದೆ. ಇಲ್ಲಿಗೆ ಹೋದರೆ, ಪ್ರಾಣಿಗಳನ್ನು ಬಿಟ್ಟು ಮತ್ತೇನೂ ಸಿಗುವುದಿಲ್ಲ (ಮನುಷ್ಯರೂ ಪ್ರಾಣಿಗಳೇ ಅಲ್ಲವೇ?). ಇಲ್ಲಿನ ಒಂದು ಟ್ರಿಪ್‌ನಲ್ಲಿ ನರಿ, ಕಾಡು ಹಂದಿ, ಜಿಂಕೆಗಳು, ಕಾಡು ನಾಯಿ, ಕೋತಿಗಳು ಮತ್ತು ಲಂಗೂರ್‌ಗಳು ನೋಡಸಿಗುತ್ತವೆ. ಸೋಮೇಶ್ವರ ಅಭಯಾರಣ್ಯದಲ್ಲಿ ಸಿಕ್ಕಾಪಟ್ಟೆ ಮಳೆ ಇರುತ್ತದೆ. ಎಷ್ಟು ಅಂದರೆ, ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಬೀಳುವ ಪ್ರದೇಶವಂತೆ ಇದು!

ಇದನ್ನೂ ಓದಿ: ಕುದುರೆ ಮುಖದ ಮೇಲೇರಿ!

ಮುಂದಿನ ಬಾರಿ ಸೋಮೇಶ್ವರಕ್ಕೆ ಹೋದಾಗ ಸುಲೋಚನೆಯನ್ನು ಹುಡುಕಬೇಡಿ. ಜೆಎಲ್‌ಆರ್‌ನ್ನು ಹುಡುಕಿ. ಪಶ್ಚಿಮ ಘಟ್ಟಗಳ ಹಸಿರಿನ ಹೊದಿಕೆಯಲ್ಲಿ ಅಡಗಿರುವ ಸೀತಾನದಿ ನೇಚರ್‌ ಕ್ಯಾಂಪ್‌, ನಿಸರ್ಗದ ಜತೆ ನಿಮ್ಮನ್ನು ಕನೆಕ್ಟ್‌ ಮಾಡುತ್ತದೆ. ಉಡುಪಿಯಿಂದ 40 ಕಿಮೀ ದೂರದಲ್ಲಿರುವ ಹೆಬ್ರಿಗೆ ಸಮೀಪದ ಈ ಸ್ಥಳ ಸೋಮೇಶ್ವರ ಅಭಯಾರಣ್ಯದ ಮಡಿಲಲ್ಲಿದೆ. ಇದು ನಿಸರ್ಗದ ಹಲವಾರು ಮಜಲುಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ. ನೀವು ನಿಸರ್ಗ ಪ್ರಿಯರಾಗಿದ್ದರೆ, ವನ್ಯಜೀವಿಗಳನ್ನು ಇಷ್ಟ ಪಡುವವರಿದ್ದರೆ ಅಥವಾ ಆರಾಮವಾಗಿ ರೆಸ್ಟ್‌ ಮಾಡುವವರಿದ್ದರೆ ಈ ಕ್ಯಾಂಪ್‌ ನಿಮ್ಮಂಥವರಿಗೆ!

New Project (13)

ಸೀತಾನದಿ ಜಂಗಲ್‌ ರೆಸಾರ್ಟ್‌ನಲ್ಲಿ ನಿಮ್ಮ ಬಜೆಟ್‌ಗೆ ತಕ್ಕುದಾದ ಹಲವಾರು ಸೂಟ್‌ಗಳಿವೆ, ನಿಮ್ಮ ಅಭಿರುಚಿಗೆ ತಕ್ಕಂಥ ಸೂಟ್‌ನ್ನು ಆಯ್ಕೆ ಮಾಡಬಹುದು. ಸಾಧಾರಣ ಟೆಂಟ್‌ಗಳಿಂದ, ಐಷಾರಾಮಿ ರೂಮ್‌ಗಳು, ಇಂಡಿಪೆಂಡೆಂಟ್‌ ಕಾಟೇಜ್‌ಗಳೆಲ್ಲ ನಿಮ್ಮ ಬರುವಿಕೆಗಾಗಿ ಕಾಯುತ್ತಿರುತ್ತವೆ. ಒಮ್ಮೆ ಇಲ್ಲಿ ಕಾಲಿಟ್ಟರೆ ಕಾಡು ಜೀವಿಗಳ ಸುಮಧುರ ಸಂಗೀತ, ಪರಿಶುದ್ಧ ಗಾಳಿ, ಶಾಂತ ಪರಿಸರ ನಿಮ್ಮದಾಗಿರುತ್ತದೆ.

ಒಳ್ಳೆಯ ಆಹಾರ, ವಿಹಾರ, ವಿಶ್ರಾಂತಿಗಾಗಿ ಜೆಎಲ್‌ಆರ್‌ಗಿಂತ ಇನ್ಯಾವ ರೆಸಾರ್ಟ್‌ನ್ನು ನಾವು ಸೂಚಿಸುತ್ತೇವೆ? ಹಲವಾರು ಬಾರಿ ಇದೇ ಜಾಗದಲ್ಲಿ ಜೆಎಲ್‌ಆರ್‌ನ ಆತಿಥ್ಯದ ಬಗ್ಗೆ ಬರೆದಿದ್ದೆವು. ರೆಸಾರ್ಟ್‌ನಲ್ಲಿ ಉಳಿಯಲು ಇಷ್ಟಪಡದ ವ್ಯಕ್ತಿಯೂ ಜೆಎಲ್‌ಆರ್‌ಗೆ ಬಂದು ಹೋದಮೇಲೆ ಇಲ್ಲಿನ ಖಾಯಂ ಗಿರಾಕಿಯಾದ ಎಷ್ಟೋ ಉದಾಹರಣೆಗಳಿವೆ. ಇಲ್ಲಿ ಮಾರ್ಗದರ್ಶಿ ನಡಿಗೆ, ಪಕ್ಷ ವೀಕ್ಷಣೆಗಳ ಜತೆಗೆ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಈ ರೆಸಾರ್ಟ್‌ನ ಒಂದು ಹೈಲೈಟ್‌ ಏನೆಂದರೆ, ಕಣ್ಣನ್ನು ಅಗಲವಾಗಿಸುವ ಜಲಪಾತಗಳು, ಸ್ವರ್ಗಕ್ಕೆ ಸಮೀಪವಿರುವ ಲ್ಯಾಂಡ್‌ಸ್ಕೇಪ್‌ಗಳು ನಿಮ್ಮ ದಿನವನ್ನು ಮತ್ತಷ್ಟು ಖುಷಿಯಾಗಿರಿಸುತ್ತದೆ. ಇಲ್ಲಿಗೆ ಬಂದಾಗ ಜೋಗಿ ಗುಂಡಿ ಜಲಪಾತ, ಓಣಕೆ ಅಬ್ಬಿ ಜಲಪಾತ, ಬರ್ಕಣ ಜಲಪಾತ, ಕೂಡ್ಲು ತೀರ್ಥ ಜಲಪಾತಗಳ ಜತೆಗೆ ಇನ್ನೂ ಹಲವಾರು ಜಲಪಾತಗಳಿವೆ. ಅದನ್ನು ನೋಡದೇ ವಾಪಸ್‌ ಹೇಗೆ ಬರುತ್ತೀರಿ?

ಇಲ್ಲಿಗೆ ಏಕೆ ಹೋಗಬೇಕು?

New Project (10)

ಕೈಗೆಟುಕುವ ಆಯ್ಕೆ: ಜೆಎಲ್‌ಆರ್‌ಗಳಲ್ಲಿ ಸೀತಾನದಿ ನೇಚರ್‌ ಕ್ಯಾಂಪ್‌ ಅತ್ಯಂತ ಬಜೆಟ್‌ ಫ್ರೆಂಡ್ಲಿ. ಆರಾಮವಾಗಿ ಕೈಗೆಟುಕುವ ಬೆಲೆಯಲ್ಲಿ ನಮ್ಮ ದಿನಗಳನ್ನು ಕಳೆಯಬಹುದು.

ಹಾವುಗಳು: ಈ ಕ್ಯಾಂಪ್‌ ಹಾವುಗಳ ವೀಕ್ಷಣೆಗೆ ತುಂಬಾ ಫೇಮಸ್‌ ಆಗಿದೆ. ಅದರಲ್ಲೂ ಆಗಾಗ ಬುಸ್‌ ಬುಸ್‌ ಎನ್ನುತ್ತಾ ನಾಗರಹಾವುಗಳು ಕಾಣಿಸಿಕೊಳ್ಳುತ್ತವೆ. ಭಾರತದಲ್ಲಿ ಹಾವಿನ ಕನಸು ಕಾಣುವುದು ತುಂಬಾ ಕಾಮನ್‌, ಆದರೆ ಇಲ್ಲಿ ನಿಜವಾದ ಹಾವನ್ನು ನೋಡಬಹುದು.

ತುಂಬಾ ದೂರವೇನಿಲ್ಲ: ಬೆಂಗಳೂರಿನಿಂದ 380 ಕಿಮೀ, 8 ತಾಸುಗಳ ಪ್ರವಾಸ ನಿಮ್ಮನ್ನು ಸೀತಾನದಿ ಜಂಗಲ್‌ ರೆಸಾರ್ಟ್‌ಗೆ ಕರೆದುಕೊಂಡು ಬರುತ್ತೆ. ವೀಕೆಂಡ್‌ಗಳಿಗೂ ಇದು ಹೇಳಿ ಮಾಡಿಸಿದಂತಿದೆ. ಈ ವೀಕೆಂಡ್‌ಗೆ ಹೋಗಿ ಬನ್ನಿ!

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ: ಮೊದಲೇ ಹೇಳಿದ ಹಾಗೆ ಈ ಶಿಬಿರ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಳಗಡೆಯೇ ಇದೆ. ಅದು ಈ ಸ್ಥಳದ ವಿಶೇಷತೆ, ಈ ಕಾಡು ಶ್ರೀಮಂತ ಜೀವವೈವಿಧ್ಯವನ್ನು ಹೊಂದಿದೆ. ಪರಿಸರ ಪ್ರಿಯರು, ಪ್ರಾಣಿ ಪಕ್ಷಿಗಳ ಪ್ರಿಯರು ಇಲ್ಲಿಗೆ ಬರಲು ಇಷ್ಟ ಪಡುತ್ತಾರೆ.

ಹಲವಾರು ಚಟುವಟಿಕೆಗಳು: ಸೀತಾನದಿ ನೇಚರ್‌ ಕ್ಯಾಂಪ್‌ನಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದೆ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಪ್ಯಾಕೇಜ್‌ನಲ್ಲಿ ನೇಚರ್‌ ವಾಕ್‌, ಪಕ್ಷಿವೀಕ್ಷಣೆ, ಕೊರಾಕಲ್‌ ರೈಡ್‌ಗಳೆಲ್ಲ ಸೇರಿ ನಿಮ್ಮ ವಾಸ್ತವ್ಯವನ್ನು ಮತ್ತಷ್ಟು ಚೆನ್ನಾಗಿಡುತ್ತದೆ.

ಇಲ್ಲಿನ ಚಟುವಟಿಕೆಗಳು

ಈ ಪ್ರಾಪರ್ಟಿಯಲ್ಲೇ ನದಿ ಹರಿಯುವುದರಿಂದ ಕಾಟೇಜ್‌ಗಳಲ್ಲಿ ವಾಸ್ತವ್ಯ ಹೂಡಿದರೆ ಪರಮಾನಂದ ಬರಬಹುದು. ಈಗ ಇಲ್ಲಿ ಇನ್ನೂ ಮಳೆ ಬರುತ್ತಿರುವುದರಿಂದ ಆದಷ್ಟು ಬೇಗ ಭೇಟಿ ನೀಡಿ. ಇಲ್ಲಿ ಆಗುಂಬೆಯೂ ಸಮೀಪವಿರುವುದರಿಂದ ಆಗುಂಬೆಗೆ ಭೇಟಿ ನೀಡುವುದನ್ನು ಮರೆಯಬೇಡಿ.

ದೋಣಿ ಸವಾರಿ:

New Project (15)

ದೋಣಿ ಸಾಗಲಿ ಮುಂದೆ ಹೋಗಲಿ ಎನ್ನುತ್ತ ದೋಣಿ ಸವಾರಿಯ ಥ್ರಿಲ್‌ನ್ನು ಪಡೆಯಿರಿ. ಈ ದೋಣಿಗಳು ಸಾಂಪ್ರದಾಯಿಕವಾಗಿ ಬಿದಿರುಗಳಿಂದ ಮಾಡಿರುತ್ತಾರೆ. ನದಿಯಲ್ಲಿ ತೇಲುತ್ತ ಹೋಗಿ, ಅಲ್ಲಿನ ಅಲೆಗಳನ್ನು ಎಂಜಾಯ್‌ ಮಾಡಿ. ಆದರೆ, ಮಳೆ ಹೆಚ್ಚಾಗಿ ನದಿ ರಭಸವಾಗಿದ್ದರೆ, ದೋಣಿವಿಹಾರ ಇರುವುದಿಲ್ಲ ಎನ್ನುವುದನ್ನು ಮಾತ್ರ ಮರೀಬೇಡಿ.

ಮಾರ್ಗದರ್ಶಿ ನಡಿಗೆಗಳು:

ಇಲ್ಲಿನ ಮಾರ್ಗದರ್ಶಿಗಳ ಜತೆ ಒದು ಸುತ್ತು ಹಾಕಿ. ಕಾಡಿನ ಬಗ್ಗೆ, ಇಲ್ಲಿನ ಪ್ರಾಣಿ-ಪಕ್ಷಿ-ಮರ-ಗಿಡಗಳ ಬಗ್ಗೆ ಇವರಿಗಿಂತ ಜಾಸ್ತಿ ಯಾರಿಗೂ ತಿಳಿದಿರಲ್ಲ. ಬೆಳಗಿನ ಜಾವ ಕಾಫಿ ಆದಮೇಲೆ, ಅವರ ಜತೆ ಹೊರಟಾಗ ಅದರ ಖುಷಿಯನ್ನು ವರ್ಣಿಸಲಾಗುವುದಿಲ್ಲ. ಖುದ್ದು ಅನುಭವಿಸಬೇಕು!

ಪಕ್ಷಿ ವೀಕ್ಷಣೆ:

ಈ ಕ್ಯಾಂಪ್‌ ಪಕ್ಷಿ ವೀಕ್ಷಣೆಗೂ ತುಂಬಾ ಫೇಮಸ್‌, ಇಲ್ಲಿ ಹಲವಾರು ಜಾತಿಯ ಪಕ್ಷಿಗಳು, ಸರೀಸೃಪಗಳು, ಮತ್ತು ಪ್ರಾಣಿಗಳನ್ನು ನೋಡಬಹುದು.

ಬಾನ್‌ಫೈರ್‌:

ಊಟಕ್ಕೂ ಮೊದಲು ಫೈರ್‌ಕ್ಯಾಂಪ್‌ನಲ್ಲಿ ಎಲ್ಲರ ಜತೆ ಕೂತು ಮಾತಾಡುತ್ತಾ, ಮನಸನ್ನು ಹಗುರ ಮಾಡಿಕೊಳ್ಳಿ.

ಕೂಡ್ಲು ತೀರ್ಥ ವೀಕ್ಷಣೆ:

ಮನಮೋಹಕ ಜಲಪಾತ ಇಲ್ಲಿಂದ ಬರೀ 12 ಕಿಮೀ ದೂರ. ಕ್ಯಾಂಪ್‌ನವರದ್ದೇ ಗಾಡಿಯಲ್ಲಿ ಜಲಪಾತಕ್ಕೆ ಹೋಗಿ ಬರಬಹುದು. ಆದರೆ, ಇಲ್ಲಿ ಜಿಗಣೆಗಳ ಸಮಸ್ಯೆ ಸಿಕ್ಕಾಪಟ್ಟೆ ಇರುವುದರಿಂದ ಉಪ್ಪು ಮತ್ತು ಒಡೋಮಸ್‌ ಇಟ್ಟುಕೊಂಡು ಹೋಗುವುದು ಬೆಟರ್‌!

ಆಗುಂಬೆ ಸೂರ್ಯಾಸ್ತ:

ಆಗುಂಬೆ ಇಲ್ಲಿಂದ ಜಾಸ್ತಿ ದೂರವೇನಿಲ್ಲ. ನಿಮ್ಮ ಪ್ರೀತಿ ಪಾತ್ರರ ಜತೆಗೆ ಹೋದಾಗಲಂತೂ ಆಗುಂಬೆಯಿಂದ ಸೂರ್ಯಾಸ್ತ ವೀಕ್ಷಿಸುವುದು ಮತ್ತಷ್ಟು ಚೆನ್ನಾಗಿರುತ್ತದೆ. ಇಲ್ಲೂ, ಕೋತಿಗಳ ಕಾಟ ಇರುತ್ತೆ, ಹುಷಾರಾಗಿರಿ.

ವಾಸ್ತವ್ಯ:

New Project (11)

ಸೀತಾನದಿ ಪ್ರಕೃತಿ ಶಿಬಿರದ ಆತಿಥ್ಯ ಟಾಪ್‌ ನಾಚ್‌. ಇಲ್ಲಿಗೆ ಬಂದ ಅತಿಥಿಗಳು ಮತ್ತೊಮ್ಮೆ ಬರುವ ಯೋಚನೆಯಲ್ಲೇ ವಾಪಸ್‌ ಹೋಗುತ್ತಾರೆ. ಶುದ್ಧವಾಗಿರುವ ಟೆಂಟ್‌ಗಳು ಮತ್ತು ಕಾಟೇಜ್‌ಗಳು ನಿಮ್ಮ ವಾಸ್ತವ್ಯವನ್ನು ಮತ್ತಷ್ಟು ಚೆನ್ನಾಗಿ ಮಾಡುತ್ತವೆ. ಕಾಡಿನ ನಡುವೆ ಈ ಶಿಬಿರವಿರುವುದರಿಂದ ಶಾಂತಿ ವಿಶ್ರಾಂತಿ ಎರಡೂ ಸಿಗುತ್ತದೆ. ಇಲ್ಲಿನ ಸ್ಥಳೀಯರೇ ಬೆಳೆದ ಯಾವುದೇ ರಾಸಾಯನಿಕಗಳನ್ನು ಬಳಸದ ಅಡುಗೆ ಸಾಮಗ್ರಿಗಳಿಂದ ರುಚಿಯಾದ ಆಹಾರವನ್ನು ಮಾಡುತ್ತಾರೆ. ಹಾಗೇ ಇಲ್ಲಿನ ಸ್ಥಳೀಯ ಆಹಾರ ಪದ್ಧತಿಯನ್ನು ಉಪಯೋಗಿಸುತ್ತಿರುವುದರಿಂದ ನಾಲಗೆ ರುಚಿಗೆ ಸ್ವಲ್ಪವೂ ಸಮಸ್ಯೆಯೇ ಇರಲ್ಲ.

ದೊಡ್ಡದಾಗಿರುವ ರೂಮ್‌ಗಳು ನಿಮ್ಮ ವಿಶ್ರಾಂತಿಗೆ ಮತ್ತು ನಿಮ್ಮ ಆರಾಮಕ್ಕೆ ಹಿತಕರವಾಗಿರುತ್ತದೆ. ಆದರೆ, ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಅದೇನೆಂದರೆ, ಇದು ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ಕರೆಂಟ್‌ ಸಮಸ್ಯೆ ಆಗಾಗ ಬರುತ್ತಿರುತ್ತದೆ. ಇಲ್ಲಿ ಸೋಲಾರ್‌ ಲ್ಯಾಂಪ್‌ ಇದ್ದರೂ, ಒಮ್ಮೊಮ್ಮೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದೊಂದೇ ಸಮಸ್ಯೆ. ಆದರೆ, ನಮ್ಮ ಮೊಬೈಲ್‌ ಹಾಗೂ ಇನ್ನಿತರ ವಸ್ತುಗಳಿಂದ ನಾವು ಸ್ವಲ್ಪ ಮಟ್ಟಿಗೆ ದೂರ ಉಳಿಯಬಹುದು. ಅದನ್ನು ಟೆಕ್‌ ಡಿಟಾಕ್ಸ್‌ ಅಂತ ಕರೀತಾರೆ. . ಇಲ್ಲಿನ ರೂಮ್‌ಗಳು ತುಂಬಾ ಚೆನ್ನಾಗಿವೆ. ಎಷ್ಟು ಅಂದ್ರೆ, ಮಿನಿಮಮ್ ಅಂದ್ರೂ 3 ಸ್ಟಾರ್‌ ರೇಟಿಂಗ್ ಕೊಡುವಷ್ಟು. ಇಲ್ಲಿನ ಮತ್ತೊಂದು ಹೈಲೈಟ್‌ ಅಂದರೆ ಸ್ವಲ್ಪ ದೊಡ್ಡ ಬಚ್ಚಲಮನೆಗಳು. ಇಲ್ಲಿ ಸೊಳ್ಳೆ ತಿಗಣೆಗಳ ಕಾಟವೂ ಇಲ್ಲ. ಇಲ್ಲಿನ ಸಿಬ್ಬಂದಿಯೂ ಸದಾ ಸಹಾಯ ಮಾಡುತ್ತ ಆತಿಥ್ಯವನ್ನು ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಮಾಡುತ್ತಾರೆ.

ಇದನ್ನೂ ಓದಿ: ಹರುಷಕ್ಕಿದೇ ದಾರಿ ಬಂಡೀಪುರ ಸಫಾರಿ

ಸೀಸನ್‌

New Project (8)

ಸೀತಾನದಿ ನೇಚರ್‌ ಕ್ಯಾಂಪ್‌ಗೆ ಭೇಟಿ ನೀಡಲು ಒಳ್ಳೆಯ ಸೀಸನ್‌ ಅಂದರೆ ಮಳೆಗಾಲದ ನಂತರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ. ಈ ಸಮಯದಲ್ಲಿ ಒಳ್ಳೆಯ ಮಳೆಯಾಗಿ, ನದಿಯೆಲ್ಲ ತುಂಬಿ ಹರಿಯುತ್ತಿರುತ್ತದೆ. ಕಂಡಲ್ಲೆಲ್ಲ ಜಲಪಾತಗಳು, ನೀರಿನ ಕೊಳ್ಳಗಳು ಸೃಷ್ಟಿಯಾಗಿರುತ್ತವೆ. ನೀರಿನ ಹರಿವು ಜಾಸ್ತಿ ಇದ್ದಾಗ ಹಲವಾರು ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದು. ರಿವರ್‌ ರಾಫ್ಟಿಂಗ್‌ ಸಹ ಮಾಡಬಹುದು. ಮಳೆಗಾಲ ಅಂದರೆ ಜೂನ್‌ ನಿಂದ ಸೆಪ್ಟೆಂಬರ್‌ನ ವರೆಗೆ ತುಂಬಾ ಮಳೆಯಾಗುತ್ತಿರುತ್ತದೆ. ಆ ಸಮಯದಲ್ಲಿ ಇಲ್ಲಿಗೆ ಹೋಗುವುದನ್ನು ತಪ್ಪಿಸಿ. ಬೇಸಗೆಯ ಮಾರ್ಚ್ ನಿಂದ ಮೇ ಕೂಡ ಹಿತಕೊಡುವ ಸಮಯ.

ಪ್ಯಾಕೇಜ್‌ಗಳು

ವುಡನ್‌ ಕಾಟೇಜ್‌ ಪ್ಯಾಕೇಜ್‌

ಟೆಂಟ್‌ ಪ್ಯಾಕೇಜ್‌

ಡಾರ್ಮೆಟರಿ ಪ್ಯಾಕೇಜ್‌

ಪ್ಯಾಕೇಜ್‌ನಲ್ಲಿ: ವಸತಿ ಸೌಕರ್ಯವನ್ನು ಒದಗಿಸುತ್ತದೆ, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಉಪಾಹಾರವನ್ನು ನೀಡಲಾಗುತ್ತದೆ. ಪ್ರಕೃತಿ ನಡಿಗೆ, ಅರಣ್ಯ ಪ್ರವೇಶ ಶುಲ್ಕಗಳು ಸೇರಿವೆ. ಪಾರ್ಕಿಂಗ್ ಸೌಲಭ್ಯಗಳು, ಮನೆಗೆಲಸ, ಆಸನ ಪ್ರದೇಶ, ಊಟದ ಹಾಲ್ ಇತ್ಯಾದಿಗಳು ಇತರ ಸೌಲಭ್ಯಗಳಾಗಿವೆ.

ದಿನಚರಿ

ದಿನ 1:

ಮಧ್ಯಾಹ್ನ 1:00 - ಚೆಕ್-ಇನ್ ಮಾಡಿ, ಕುಳಿತುಕೊಂಡು ಫ್ರೆಶ್ ಆಗಿ.

ಮಧ್ಯಾಹ್ನ 1:30 - 2:30 - ರುಚಿಕರವಾದ ಊಟವನ್ನು ಆನಂದಿಸಿ.

ಸಂಜೆ 4:30 - 6:00 - ರೋಮಾಂಚಕ ದೋಣಿ ಸವಾರಿಯನ್ನು ಅನುಭವಿಸಿ.

ಸಂಜೆ 6:00 - 6:30 - ಚಹಾ/ಕಾಫಿಗೆ ವಿರಾಮ ತೆಗೆದುಕೊಳ್ಳಿ.

ಸಂಜೆ 8:30 - 9:30 - ರುಚಿಕರವಾದ ಭೋಜನವನ್ನು ಆನಂದಿಸಿ.

ದಿನ 2:

ಬೆಳಗ್ಗೆ 7:00 - 7:15 - ಎದ್ದೇಳಿ ಚಹಾ/ಕಾಫಿಯನ್ನು ಆನಂದಿಸಿ.

ಬೆಳಗ್ಗೆ 7:30 - 8:30 - ಟ್ರೆಕ್ಕಿಂಗ್ ಅಥವಾ ಪ್ರಕೃತಿ ಹಾದಿಯಲ್ಲಿ ಹೋಗಿ.

ಬೆಳಗ್ಗೆ 8:30 - 9:30 - ಉಪಾಹಾರವನ್ನು ಸೇವಿಸಿ.

ಬೆಳಗ್ಗೆ 10:30 - ಸೀತಾನದಿ ಪ್ರಕೃತಿ ಶಿಬಿರದಿಂದ ನಿರ್ಗಮಿಸಿ, ಮತ್ತೊಮ್ಮೆ ಬರಲು ಸಿದ್ಧರಾಗಿ.

-

ಸಂಪರ್ಕ

ಸೀತಾನದಿ ನೇಚರ್ ಕ್ಯಾಂಪ್, ಹೆಬ್ರಿ

ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ-576112

ಮ್ಯಾನೇಜರ್: ದೇವರಾಜ್.

ಸಂಪರ್ಕ ಸಂಖ್ಯೆ: 9740602889 / 9449599758

ಇಮೇಲ್ ಐಡಿ: info@junglelodges.com

--

ದಾರಿ ಹೇಗೆ?

ವಿಮಾನದ ಮೂಲಕ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇದು 94 ಕಿಮೀ ದೂರದಲ್ಲಿದೆ.

ರೈಲು ಮೂಲಕ: ಹತ್ತಿರದ ರೈಲು ನಿಲ್ದಾಣ ಉಡುಪಿ ನಿಲ್ದಾಣ (48 ಕಿಮೀ).

ರಸ್ತೆ ಮೂಲಕ: ಶಿಬಿರವು ಬೆಂಗಳೂರಿನಿಂದ NH75 ಮೂಲಕ 360 ಕಿಮೀ ದೂರದಲ್ಲಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!