ಇರುವೆಗಳ ರೂಪದ ದೇವರಿಂದ ಸಕ್ಕರೆ ಖಾಯಿಲೆ ಮಾಯ !
ಮನುಷ್ಯನಿಗೆ ಒಮ್ಮೆ ಸಕ್ಕರೆ ಖಾಯಿಲೆ ಅಂಟಿಕೊಂಡರೆ ಅದರಿಂದ ಮುಕ್ತಿ ಹೊಂದಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಆಹಾರ ಕ್ರಮವನ್ನು ಬದಲಿಸಿಕೊಂಡು, ನಿಯಮಿತ ವ್ಯವಾಮ ಹಾಗೂ ಔಷಧಿಯ ಮೂಲಕ ಡಯಾಬಿಟಿಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಷ್ಟೇ. ಆದರೆ ಈ ದೇವಾಲಯಕ್ಕೆ ನೀವು ಒಮ್ಮೆ ಭೇಟಿ ಕೊಟ್ಟರೆ ಸಾಕು ಸಕ್ಕರೆ ಖಾಯಿಲೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ ಎಂದರೆ ನೀವು ನಂಬಲೇಬೇಕು.
ಸಾಮಾನ್ಯವಾಗಿ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸಲು, ಅನಾರೋಗ್ಯವಿದ್ದರೆ ಆರೋಗ್ಯವನ್ನು ಕರುಣಿಸಲು, ಮನೆ, ಉದ್ಯೋಗ ಅಷ್ಟೇ ಯಾಕೆ ವಿವಾಹವಾಗುವುದು ತಡವಾಗುತ್ತಿದೆಯೆಂದರೂ ವಿಶೇಷ ದೇವಾಲಯಗಳು ನಮ್ಮ ದೇಶದೊಳಗಿದೆ. ಸಕಲ ಸಂಸ್ಕೃತಿಗಳ ನಾಡು, ದೇಗುಲಗಳ ಬೀಡು ಎಂದೇ ಕರೆಸಿಕೊಳ್ಳುವ ನಮ್ಮ ಭಾರತದಲ್ಲಿ ಬೇಡಿದ ವರಗಳನ್ನು ಕರುಣಿಸಲು, ಭಕ್ತರ ಇಚ್ಛೆಗಳನ್ನು ಪೂರೈಸುವ ದೇವಾಲಯಗಳು ಸಾಕಷ್ಟಿವೆ. ಆದರೆ ವಿಶೇಷವಾಗಿ ಗುಣಪಡಿಸಲು ಕಷ್ಟಸಾಧ್ಯವೆಂಬ ಸಕ್ಕರೆ ಖಾಯಿಲೆಯಿಂದಲೂ ಮುಕ್ತಿ ಕೊಡಿಸುವ ದೇವಾಲಯವೊಂದಿದೆ ಎಂದರೆ ನೀವು ನಂಬುತ್ತೀರಾ..ಹೌದು, ಇಂತಹ ದೇವಾಲಯವಿರುವ ಕರ್ನಾಟಕ ನೆರೆಯ ರಾಜ್ಯ ತಮಿಳುನಾಡಿನಲ್ಲಿ.
ತಮಿಳುನಾಡಿನ ತಂಜಾವೂರಿನಿಂದ ಸುಮಾರು 26ಕಿಮೀ ದೂರದಲ್ಲಿರುವ ಅಮ್ಮಪೆಟ್ಟಿ ಎಂಬ ಗ್ರಾಮದಲ್ಲಿ ನೆಲೆಸಿರುವ ವೀಣಿ ಕರುಂಬೇಶ್ವರ ದೇವಾಲಯಕ್ಕೆ ಸಕ್ಕರೆ ಖಾಯಿಲೆಯಿರುವವರು ಭೇಟಿ ನೀಡಿ, ದೇವರ ದರ್ಶನ ಪಡೆದು, ಸಂಪ್ರದಾಯದಂತೆ ಪೂಜೆ ಸಲ್ಲಿಸುವ ಮೂಲಕ ಖಾಯಿಲೆಯಿಂದ ಮುಕ್ತಿ ಹೊಂದುತ್ತಾರೆ.

ದೇವಸ್ಥಾನಕ್ಕಿದೆ 5000 ವರ್ಷಗಳ ಇತಿಹಾಸ:
ವೀಣಿ ಕರುಂಬೇಶ್ವರ ದೇವಾಲಯಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಇಲ್ಲಿ ಶಿವನನ್ನು ಪೂಜಿಸಲಾಗುತ್ತಿದ್ದು, ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ನೋಡಿದರೆ ಕಬ್ಬಿನ ರಾಶಿಯ ನಡುವೆ ಉದ್ಭವವಾಗಿರಬಹುದೆಂದು ಭಾಸವಾಗುತ್ತದೆ. ಶಿವನೊಂದಿಗೆ ಶ್ರೀಕೃಷ್ಣನಿಗು ಈ ದೇವಾಲಯಕ್ಕೂ ಸಂಬಂಧವಿರುವುದಾಗಿ ಐತಿಹ್ಯವಿದೆ.
ಸಕ್ಕರೆ ಖಾಯಿಲೆ ನಿವಾರಣೆ:
ಸಕ್ಕರೆ ಖಾಯಿಲೆಯಿಂದ ಮುಕ್ತಿಹೊಂದಬೇಕಾದರೆ, ಇಲ್ಲಿಗೆ ಬರುವಾಗ ಅರ್ಧ ಕೆಜಿ ರವೆ ಹಾಗೂ ಅಷ್ಟೇ ಪ್ರಮಾಣದ ಸಕ್ಕರೆಯನ್ನು ಮಿಶ್ರಣಮಾಡಿಕೊಂಡು ತಂದು ದೇವರ ಎದುರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು. ಇದಾದ ಬಳಿಕ ಆ ಮಿಶ್ರಣವನ್ನು ದೇವಾಲಯದ ಹೊರಭಾಗದಲ್ಲಿ ಹಾಕಬೇಕು. ಈ ವೇಳೆ ಅಲ್ಲಿಗೆ ಬರುವ ಇರುವೆಗಳು ರವೆಯನ್ನು ಉಳಿಸಿ ಸಕ್ಕರೆಯನ್ನಷ್ಟೇ ತಿನ್ನುತ್ತವೆ. ಇರುವೆ ಹೇಗೆ ಸಕ್ಕರೆಯನ್ನು ತಿಂದು ಮುಗಿಸುವುದೋ ಹಾಗೆಯೇ ಸಕ್ಕರೆ ಖಾಯಿಲೆಯಿರುವ ದೇಹದಿಂದ ದೇವರು ಖಾಯಿಲೆಯನ್ನು ತೆಗೆದುಹಾಕಲಿದ್ದಾನೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು.

ಇರುವೆಗಳ ರೂಪದಲ್ಲಿ ಕಾಣಿಸಿಕೊಳ್ಳುವ ದೇವರು:
ಸಕ್ಕರೆ ಖಾಯಿಲೆಯಿರುವ ಭಕ್ತರನ್ನು ಆ ಖಾಯಿಲೆಯಿಂದ ಮುಕ್ತಿ ಪಡೆಯಲು ದೇವರು ಇರುವೆ ರೂಪದಲ್ಲಿ ಬಂದು ಸಹಾಯ ಮಾಡುತ್ತಾರೆ ಎಂಬುದು ಇಲ್ಲಿನವರ ನಂಬೆಕೆ. ಇದೇ ಕಾರಣಕ್ಕೆ ಇಲ್ಲಿರುವ ಇರುವೆಗಳನ್ನು ದೇವರ ಇರುವೆಗಳು ಎಂಬುದಾಗಿ ಕರೆಯಲಾಗುತ್ತದೆ. ಅಲ್ಲದೆ ದೇವಾಲಯದ ವಠಾರದಲ್ಲಿ ಕಾಣಸಿಗುವ ಇರುವೆಗಳನ್ನು ಇಲ್ಲಿಗೆ ಭೇಟಿ ನೀಡುವ ಭಕ್ತರು ಗೌರವದಿಂದ ಪೂಜಿಸುತ್ತಾರೆ.
ಒಟ್ಟಿನಲ್ಲಿ ಸಕ್ಕರೆ ಖಾಯಿಲೆಯಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಔಷಧಿಗಳು ಲಭ್ಯವಿದೆಯಾದರೂ, ಅವೆಲ್ಲವನ್ನು ಸೇವಿಸಿ ಗುಣಮುಖವಾಗಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದ್ದರೆ, ತಮಿಳುನಾಡಿನ ಈ ವೀಣಿ ಕರುಂಬೇಶ್ವರ ದೇವಾಲಯಕ್ಕೆ ಒಮ್ಮೆಹೋಗಿ ಬನ್ನಿ..