ಕೈಗೆಟುಕುವ ದರಯಲ್ಲಿ ಧಾರ್ಮಿಕ ಪ್ರವಾಸ; ಕೆಎಸ್ಆರ್ಟಿಸಿಯಿಂದ ಬೆಂಗಳೂರು ಟು ಮೇಲುಕೋಟೆ ಪ್ಯಾಕೇಜ್
ಬೆಂಗಳೂರಿನ ಧಾರ್ಮಿಕ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ಕೈಗಟುಕುವ ಬೆಲೆಯಲ್ಲಿ ಹೊಸ ಪ್ಯಾಕೇಜ್ ಪರಿಚಯಿಸಿದೆ. ಇದರ ಮೂಲಕ ನೀವು ಭೇಟಿ ನೀಡಲೇ ಬೇಕು ಅಂದುಕೊಂಡಿದ್ದ ಪ್ರಸಿದ್ಧ ದೇವಾಲಯಗಳನ್ನು ನಿಮ್ಮ ಬಜೆಟ್ ನಲ್ಲಿಯೇ ಸಂದರ್ಶಿಸಬಹುದು.
ಕುಟುಂಬದ ಜತೆಗೆ, ಸ್ನೇಹಿತರೊಂದಿಗೆ ಮೇಲುಕೋಟೆ, ಶ್ರೀರಂಗಪಟ್ಟಣದ ದೇವಾಲಯಗಳನ್ನು ಭೇಟಿ ಮಾಡಬೇಕು ಅಂದುಕೊಂಡ ಧಾರ್ಮಿಕ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಖುಷಿಯ ಸುದ್ದಿಯೊಂದನ್ನು ನೀಡಿದೆ. ಕೈಗೆಟುಕುವ ದರಯಲ್ಲಿ ನೀವು ಈ ಸುಂದರ ದೇವಾಲಯಗಳಷ್ಟೇ ಅಲ್ಲದೆ ಅಲ್ಲಿನ ಪ್ರೇಕ್ಷಣೀಯ ತಾಣಗಳನ್ನೂ ಸಂದರ್ಶಿಸಬಹುದು. 2025ರ ಈ ಹೊಸ ಪ್ಯಾಕೇಜ್ ವಾರಾಂತ್ಯಗಳಲ್ಲಷ್ಟೇ ಸೀಮಿತ.
ಬೆಂಗಳೂರಿನಿಂದ ಮೇಲುಕೋಟೆಗೆ
ಬೆಂಗಳೂರಿನಿಂದ ಪ್ರಾರಂಭವಾಗಿ ಶ್ರೀರಂಗಪಟ್ಟಣದ ದೇವಾಲಯಗಳು, ಕಲ್ಲಹಳ್ಳಿಯಲ್ಲಿ ದೇವಾಲಯಗಳು ಮತ್ತು ಮೇಲುಕೋಟೆಯ ಪ್ರೇಕ್ಷಣೀಯ ಸ್ಥಳಗಳನ್ನು ಈ ಪ್ರವಾಸದ ವೇಳೆ ವೀಕ್ಷಿಸಬಹುದು. ಸುಮಾರು 350 ಕಿ.ಮೀ ದೂರ ಪ್ರಯಾಣಿಸಲು ಕೆಎಸ್ಆರ್ಟಿಸಿ ಅಶ್ವಮೇಧ ಸಾರಿಗೆ ಬಸ್ಸನ್ನು ಸಜ್ಜುಗೊಳಿಸಿದೆ.
ಯಾವೆಲ್ಲಾ ದೇವಾಲಯಗಳಿಗೆ ಭೇಟಿ, ಪ್ರವೇಶ ಶುಲ್ಕವೆಷ್ಟು?
ಮೇ 31, 2025ರಿಂದ ಈ ಹೊಸ ಪ್ಯಾಕೇಜ್ ಪ್ರಾರಂಭವಾಗಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರು ಬುಕ್ ಮಾಡುವ ಅವಕಾಶವಿದೆ. ವಯಸ್ಕರಿಗೆ ಆಹಾರವನ್ನು ಹೊರತುಪಡಿಸಿ 670 ರೂ. ಹಾಗೂ 6 ವರ್ಷದಿಂದ 12 ವರ್ಷ ವಯಸ್ಸಿನ ಮಕ್ಕಳು ಪ್ರಯಾಣಿಸುತ್ತಿದ್ದರೆ ಒಬ್ಬರಿಗೆ 500 ರೂ. ಕೊಟ್ಟು ಬುಕ್ಕಿಂಗ್ ಮಾಡಬೇಕಾಗಿದೆ.
ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಪ್ರಾರಂಭವಾಗುವ ನಿಮ್ಮ ಪ್ರಯಾಣ ಅಲ್ಲಿಂದ ನಿಮಿಷಾಂಬ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ ದೇವಾಲಯ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯ, ಅಕ್ಕ ಕೊಳ, ತಂಗಿ ಕೊಳ, ರಾಯ ಗೋಪುರಂ ಸ್ಥಳಗಳನ್ನು ಸಂದರ್ಶಿಸಿ, ರಾತ್ರಿ ಬೆಂಗಳೂರಿಗೆ ಹಿಂದಿರುಗುತ್ತೀರಿ.