Friday, October 3, 2025
Friday, October 3, 2025

ಕರ್ನಾಟಕದ 7 ಜಿಲ್ಲೆಗಳಿಂದ ಕಾಶಿ ಯಾತ್ರೆಗೆ ರೈಲು ಪ್ಯಾಕೇಜ್‌

ಕರ್ನಾಟಕದ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಐಆರ್‌ಸಿಟಿಸಿ ಮತ್ತು ಕರ್ನಾಟಕ ಸರ್ಕಾರವು ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆ ಎಂಬ ಎರಡು ವಿಶೇಷ ಪ್ರವಾಸಗಳನ್ನು ಪ್ರಾರಂಭಿಸಿವೆ. ಕರ್ನಾಟಕದ ಯಾತ್ರಿಕರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಿದ್ದು, ದೇಗುಲ ದರ್ಶನಕ್ಕಿದು ಸೂಕ್ತ ಕಾಲ.

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಬೇಕು, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಒಂದು ಕ್ಷಣವಾದರೂ ಕೂರಬೇಕು ಎಂದು ಅಂದುಕೊಳ್ಳದವರಿಲ್ಲ. ಇಂಥ ಧಾರ್ಮಿಕ ಯಾತ್ರಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಐಆರ್‌ಸಿಟಿಸಿ ಹಾಗೂ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಸಹಯೋಗದೊಂದಿಗೆ ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಎರಡು ವಿಶೇಷ ಯಾತ್ರಾ ಪ್ರವಾಸಗಳನ್ನು ಘೋಷಿಸಿದೆ. ರಾಜ್ಯದ 7 ಜಿಲ್ಲೆಗಳ ಮೂಲಕ ಈ ರೈಲು ಸಂಚಾರ ನಡೆಸಲಿದೆ.

ಕಾಶಿ ಯಾತ್ರೆ ಇನ್ನು ಬಲು ಸುಲಭ

ಮೊದಲನೆಯ ಪ್ರವಾಸ ಪ್ಯಾಕೇಜ್‌ ನ ಮೂಲಕ ಯಾತ್ರಾರ್ಥಿಗಳು, ಕಾಶಿ ದರ್ಶನವನ್ನು ಮಾಡಬಹುದು. 9 ದಿನಗಳ ಪ್ರಯಾಣವಾಗಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಯಾತ್ರೆಯು ಕಾಶಿಯ ವಿಶ್ವನಾಥ ದೇವಸ್ಥಾನ, ತುಳಸಿ ಮಾನಸ ದೇವಸ್ಥಾನ, ಸಂಕಟ ಮೋಚನ ಹನುಮಾನ್ ದೇವಸ್ಥಾನದ ಭೇಟಿಯನ್ನು ಒಳಗೊಂಡಿದೆ. ಅಲ್ಲದೆ ಅಯೋದ್ಯದಲ್ಲಿ ರಾಮ ಜನ್ಮ ಭೂಮಿ ದೇವಸ್ಥಾನ, ಹನುಮಾನ್ ಗಡ್, ವಾರಣಾಸಿ ಗಯಾ, ಬೋಧಗಯಾ ಮತ್ತು ಪ್ರಯಾಗರಾಜ್ ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಈ ಪ್ರವಾಸಕ್ಕಾಗಿ ಎಸ್.ಎಂ.ವಿ.ಟಿ ಬೆಂಗಳೂರು / ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಹತ್ತುವ ಅವಕಾಶ ಕಲ್ಪಿಸಲಾಗಿದೆ. ಈ ಪ್ಯಾಕೇಜ್‌ನ ಒಟ್ಟು ವೆಚ್ಚ ಪ್ರತಿ ವ್ಯಕ್ತಿಗೆ 22,500 ರೂ.. ಆದರೆ, ಕರ್ನಾಟಕದಲ್ಲಿ ವಾಸಿಸುವ ಯಾತ್ರಿಕರಿಗೆ ಕರ್ನಾಟಕ ಸರ್ಕಾರದಿಂದ 7,500 ರೂ. ಸಹಾಯಧನ ದೊರೆಯಲಿದ್ದು, ಪರಿಣಾಮಕಾರಿ ವೆಚ್ಚ 15,000 ರೂ. ಕ್ಕೆ ಇಳಿಯಲಿದೆ.

kashi temple

ದಕ್ಷಿಣ ಯಾತ್ರೆ ಗೆ ಇದು ಸೂಕ್ತ ಕಾಲ

ಎರಡನೇ ಪ್ರವಾಸ ಪ್ಯಾಕೇಜ್‌ 'ದಕ್ಷಿಣ ಯಾತ್ರೆ'ಯಾಗಿದ್ದು, ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 16 ರವರೆಗೆ 6 ದಿನಗಳ ಪ್ರಯಾಣವಿದು. ಈ ಯಾತ್ರೆಯು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಾದ ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ ಮತ್ತು ಮಧುರೈ ದೇವಾಲಯಗಳ ಭೇಟಿಯನ್ನು ಒಳಗೊಂಡಿದೆ. ಈ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ 15,000 ರೂ. ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಕರ್ನಾಟಕ ಸರ್ಕಾರದಿಂದ 5,000 ರೂ.ವಿಶೇಷ ಸಬ್ಸಿಡಿ ಸಿಗಲಿದ್ದು, ಅಂತಿಮ ಬೆಲೆ 10,000 ರೂ. ಆಗಲಿದೆ. ಈ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಮತ್ತು ಎಸ್.ಎಂ.ವಿ.ಟಿ ಬೆಂಗಳೂರುಗಳಿಂದ ಈ ರೈಲು ಹತ್ತುವ ಅವಕಾಶವಿದೆ.

ಯಾತ್ರೆಯ ವಿಶೇಷತೆಗಳು ಏನು?

ಎರಡೂ ಯಾತ್ರೆಗಳಿಗೂ ಭಾರತ್ ಗೌರವ್ ಪ್ರವಾಸಿ ರೈಲಿನ ಎಸಿ ತ್ರಿ ಟೈರ್ ಆಸನ ವ್ಯವಸ್ಥೆ ಇರಲಿದೆ. ಪ್ಯಾಕೇಜ್‌ನಲ್ಲಿ ವಿವಿಧ ಸ್ಥಳಗಳಲ್ಲಿ ಎರಡು/ಮೂರು ಹಂಚಿಕೆಯ ಆಧಾರದ ಮೇಲೆ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ವಸತಿ ಇರಲಿದೆ. ಪ್ರಯಾಣಿಕರಿಗೆ ಸಸ್ಯಾಹಾರಿ ಊಟ ನೀಡಲಾಗುತ್ತಿದ್ದು, ಹವಾನಿಯಂತ್ರಿತವಲ್ಲದ ಬಸ್ಸುಗಳ ಮೂಲಕ ಪ್ರವಾಸಿ ಸ್ಥಳಗಳ ಭೇಟಿಗೆ ಅವಕಾಶವಿದೆ. ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಿಗಳು ಇರುವುದರ ಜತೆಗೆ ಪ್ರಯಾಣಿಕರಿಗಾಗಿ ಪ್ರಯಾಣ ವಿಮೆ ಇರಲಿದೆ.ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ, ಯಾತ್ರಿಕರು ಐಆರ್‌ಸಿಟಿಸಿ ಕಚೇರಿಗಳನ್ನು ಸಂಪರ್ಕಿಸಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..