Monday, July 6, 2026
Monday, July 6, 2026

ಟರ್ಕಿಯ 665ನೇ ಕಿರ್ಕ್‌ಪಿನಾರ್ ಎಣ್ಣೆ ಕುಸ್ತಿ ಉತ್ಸವ

ಎಣ್ಣೆ ಸವರಿಕೊಂಡು ಅಖಾಡಕ್ಕಿಳಿಯುವ ಕುಸ್ತಿಪಟುಗಳು… 660 ವರ್ಷಗಳ ಇತಿಹಾಸ ಹೊಂದಿರುವ ಸಂಪ್ರದಾಯ… ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿರುವ ಟರ್ಕಿಯ ಕಿರ್ಕ್‌ಪಿನಾರ್ ಎಣ್ಣೆ ಕುಸ್ತಿ ಉತ್ಸವ!

ಟರ್ಕಿಯ ವಾಯುವ್ಯ ಭಾಗದ ಎಡಿರ್ನೆ ನಗರದಲ್ಲಿ ನಡೆಯುತ್ತಿರುವ 665ನೇ ಕಿರ್ಕ್‌ಪಿನಾರ್ ಎಣ್ಣೆ ಕುಸ್ತಿ ಉತ್ಸವ ಅಂತಿಮ ಹಂತ ತಲುಪಿದ್ದು, ಸಾವಿರಾರು ಜನರು ಈ ಅಪರೂಪದ ಸಾಂಪ್ರದಾಯಿಕ ಕ್ರೀಡೆಯನ್ನು ಕಣ್ತುಂಬಿಕೊಂಡಿದ್ದಾರೆ. ದೇಹಕ್ಕೆ ಆಲಿವ್ ಎಣ್ಣೆ ಸವರಿಕೊಂಡು ಕಪ್ಪು ಚರ್ಮದ ಪ್ಯಾಂಟ್ ಧರಿಸಿದ ಕುಸ್ತಿಪಟುಗಳು ಹುಲ್ಲಿನ ಮೈದಾನದಲ್ಲಿ ಸೆಣಸಾಡುವ ಈ ಕ್ರೀಡೆ ವಿಶ್ವದ ಅತ್ಯಂತ ಹಳೆಯ ನಿರಂತರ ಕ್ರೀಡಾ ಸಂಪ್ರದಾಯಗಳಲ್ಲಿ ಒಂದಾಗಿದೆ.

ಸುಮಾರು 660 ವರ್ಷಗಳ ಇತಿಹಾಸ ಹೊಂದಿರುವ ಕಿರ್ಕ್‌ಪಿನಾರ್ ಉತ್ಸವವನ್ನು 2010ರಲ್ಲಿ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಒಟ್ಟೋಮನ್ ಸಾಮ್ರಾಜ್ಯದ ಕಾಲದಲ್ಲಿ 40 ಯೋಧರು ನಡೆಸಿದ ಕುಸ್ತಿ ಪಂದ್ಯಗಳಿಂದ ಈ ಸಂಪ್ರದಾಯ ಆರಂಭವಾಯಿತು ಎಂಬ ಐತಿಹ್ಯವಿದೆ. ಇಬ್ಬರು ಯೋಧರು ಹೋರಾಟದ ವೇಳೆ ಸಾವಿಗೀಡಾದ ಸ್ಥಳದಲ್ಲಿ ನೀರಿನ ಬುಗ್ಗೆ ಉಕ್ಕಿಬಂದ ಕಾರಣ ಆ ಪ್ರದೇಶಕ್ಕೆ 'ಕಿರ್ಕ್‌ಪಿನಾರ್' (ನಲವತ್ತು ಬುಗ್ಗೆಗಳು) ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.

ಇದನ್ನೂ ಓದಿ: ಟರ್ಕಿ, ಅಜರ್ಬೈಜಾನ್ ಬಿಟ್ಟು ಈ ದೇಶಕ್ಕೆ ಪ್ರವಾಸಕ್ಕೆ ಹೋಗಬಹುದು

ಈ ಉತ್ಸವ ಕೇವಲ ಕ್ರೀಡೆಯಲ್ಲ, ಇದು ಟರ್ಕಿಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಪ್ರತೀಕ. ಸಾಂಪ್ರದಾಯಿಕ ಮೆರವಣಿಗೆಗಳು, ಡೊಳ್ಳಿನ ನಾದ, ಕುಸ್ತಿಪಟುಗಳ ಕಾವ್ಯಾತ್ಮಕ ಪರಿಚಯ ಹಾಗೂ ವಿಜೇತರಿಗೆ ಚಿನ್ನದ ಬೆಲ್ಟ್ ಪ್ರದಾನ ಮಾಡುವ ಆಚರಣೆಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಅನುಭವಿ ಗುರುಗಳ ಮಾರ್ಗದರ್ಶನದಲ್ಲಿ ಯುವ ಕುಸ್ತಿಪಟುಗಳು ಕೇವಲ ಕುಸ್ತಿ ತಂತ್ರವಷ್ಟೇ ಅಲ್ಲ, ವಿನಯ, ಶಿಸ್ತು ಮತ್ತು ಗೌರವದ ಮೌಲ್ಯಗಳನ್ನೂ ಕಲಿಯುತ್ತಾರೆ.

Untitled design (51)

ಎಡಿರ್ನೆ ಪ್ರಾಂತ್ಯದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ನಿರ್ದೇಶಕ ಕೆಮಾಲ್ ಸೊಯ್ತುರ್ಕ್ ಅವರ ಪ್ರಕಾರ, ಕಿರ್ಕ್‌ಪಿನಾರ್ ಎಡಿರ್ನೆಯ ಪ್ರಮುಖ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮದ ಬ್ರ್ಯಾಂಡ್ ಆಗಿದ್ದು, ವಿಶ್ವದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ನಗರಕ್ಕೆ ಸೆಳೆಯುತ್ತಿದೆ.

ಹತ್ತು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಎಡಿರ್ನೆಗೆ ಪ್ರತಿ ಬೇಸಿಗೆಯಲ್ಲಿ ಭೇಟಿ ನೀಡಿ ಕುಸ್ತಿ ಪಂದ್ಯಗಳನ್ನು ವೀಕ್ಷಿಸುವುದರ ಜತೆಗೆ ಯುನೆಸ್ಕೋ ಪರಂಪರೆ ತಾಣವಾದ ಸೆಲಿಮಿಯೆ ಮಸೀದಿ ಹಾಗೂ ಸ್ಥಳೀಯ ಪ್ರಸಿದ್ಧ ಆಹಾರಗಳನ್ನು ಸವಿಯುತ್ತಾರೆ. ಇದರಿಂದ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ಆದಾಯ ದೊರೆಯುತ್ತಿದೆ. ಉತ್ಸವದ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಕೊಠಡಿಗಳು ಹಲವು ತಿಂಗಳ ಮುಂಚೆಯೇ ಬುಕ್ ಆಗಿರುತ್ತವೆ.

ಎರಡು ದಶಕಗಳಿಂದ ಈ ಉತ್ಸವಕ್ಕೆ ಬರುತ್ತಿರುವ ಪ್ರವಾಸಿಗ ಎಫ್ಕಾನ್ ಕುರ್ಟ್‌ಚೆಬೆ, 'ಇದು ಕೇವಲ ಕ್ರೀಡೆಯಲ್ಲ, ನಮ್ಮ ಸಂಸ್ಕೃತಿಯ ಆತ್ಮ' ಎಂದು ಹೇಳಿದ್ದು, ಶತಮಾನಗಳಷ್ಟು ಹಳೆಯ ಸಂಪ್ರದಾಯವು ಇಂದಿಗೂ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಬಲ ತುಂಬುತ್ತಿರುವುದನ್ನು ಈ ಉತ್ಸವ ಮತ್ತೊಮ್ಮೆ ಸಾಬೀತುಪಡಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ