ಕರ್ನಾಟಕದ 5 ಅಮೃತ್ ರೈಲ್ವೆ ನಿಲ್ದಾಣ ನಾಳೆಯಿಂದ ಸೇವೆಗೆ ಸಿದ್ಧ
ಅಮೃತ ಭಾರತ ರೈಲು ಯೋಜನೆಯಡಿ ದೇಶದ ರೈಲ್ವೇ ಪ್ರಯಾಣವನ್ನು ಉನ್ನತೀಕರಿಸುವ ನಿಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕರ್ನಾಟಕದ 5 ರೈಲು ನಿಲ್ದಾಣಗಳು ಸೇರಿದಂತೆ ದೇಶದ 18 ರಾಜ್ಯಗಳ 103 ಅಮೃತ್ ನಿಲ್ದಾಣಗಳನ್ನು ನವಿಕರಣಗೊಳಿಸಿ, ಇಂದು ಪ್ರಯಾಣಿಕರಿಗೆ ಮುಕ್ತಗೊಳಿಸಿದ್ದಾರೆ.
ನವದೆಹಲಿ, ಮೇ 22: ದೇಶದ 18 ರಾಜ್ಯಗಳಲ್ಲಿ ರೈಲ್ವೆ ಪ್ರಯಾಣಕ್ಕೆ ಪುಷ್ಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು 103 ನವೀಕರಣಗೊಂಡ ಅಮೃತ್ ರೈಲ್ವೆ ನಿಲ್ದಾಣಗಳನ್ನು ಉದ್ಘಾಟಿಸಿದ್ದಾರೆ. ಅಮೃತ ಭಾರತ ರೈಲು ಯೋಜನೆಯಡಿ ಕರ್ನಾಟಕದ ನೈರುತ್ಯ ರೈಲ್ವೇ ವಿಭಾಗದ ಗದಗ, ಧಾರವಾಡದ ಅಮೃತ್ ಸ್ಟೇಷನ್ಗಳು, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲು ನಿಲ್ದಾಣಗಳು ನವೀಕರಣಗೊಳಿಸಿದ್ದು, ಇಂದು ಪ್ರಯಾಣಿಕರಿಗೆ ಮುಕ್ತವಾಗಿದೆ.

ರಾಜಸ್ಥಾನದ ಬಿಕಾನೇರ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 103 ಅಮೃತ್ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿರುವ ಈ 103 ಅಮೃತ ನಿಲ್ದಾಣಗಳನ್ನು ರೂ.1,100 ಕೋಟಿಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಅಮೃತ ಭಾರತ ನಿಲ್ದಾಣ ಯೋಜನೆ (ಎ ಬಿ ಎಸ್ ಎಸ್) ಅಡಿಯಲ್ಲಿ ಪ್ರಾದೇಶಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ಹೆಚ್ಚಿನ ಪ್ರಾಶಸ್ತ್ಯವನ್ನು ನಡಲಾಗಿದೆ. ಅಲ್ಲದೆ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ನೀಡುವ ಸಲುವಾಗಿ 1,300ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ದಿ ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳು ಸೇರಿದಂತೆ ಪ್ರಯಾಣವನ್ನು ಸುಗಮಗೊಳಿಸುವ ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದೆ.