Tuesday, September 15, 2026
Tuesday, September 15, 2026

ಮಿಲಿಯನ್ ಬಾಟಲಿಗಳ ಬೌದ್ಧ ದೇವಾಲಯ

ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಖುನ್ ಹಾನ್‌ ಪಟ್ಟಣದಲ್ಲಿರುವ ಬೌದ್ಧ ದೇವಾಲಯವು ಅದರ ಪ್ರಾಚೀನ ಇತಿಹಾಸ ಅಥವಾ ಆಧ್ಯಾತ್ಮಿಕ ವಿಧಿಗಳಿಗಾಗಿ ಅಲ್ಲ, ಬದಲಾಗಿ ಅದನ್ನು ಬೆಂಬಲಿಸುವ ಗೋಡೆಗಳಿಂದಾಗಿ ವಿಶಿಷ್ಟವಾಗಿದೆ!

  • ವಿದ್ಯಾ ವಿ. ಹಾಲಭಾವಿ

ಆಗಸದಲ್ಲಿ ಹೊಳೆಯುವ ಸೂರ್ಯನಿಂದ ಚುಂಬಿಸಲ್ಪಟ್ಟ ಭೂದೃಶ್ಯಗಳು, ಚಿನ್ನದ ದೇವಾಲಯಗಳು, ಗೌಜು ಗದ್ದಲಗಳಿಂದ ಗಿಜಿಗುಟ್ಟುವ ಮಾರುಕಟ್ಟೆಗಳು ಮತ್ತು ಪ್ರಶಾಂತ ಬಯಲುಗಳ ನೋಟಗಳೊಂದಿಗೆ ಪ್ರಪಂಚದಾದ್ಯಂತದ ಪ್ರಯಾಣಿಕರನ್ನು ತನ್ನತ್ತ ಸೆಳೆಯುವ ದೇಶ ಥೈಲ್ಯಾಂಡ್. ಆದರೆ, ಈ ಉಷ್ಣವಲಯದ ಸ್ವರ್ಗದಲ್ಲಿ ಅಡಗಿರುವ ಗುಪ್ತ ರತ್ನವೊಂದು ನಿಮ್ಮನ್ನು ಖಂಡಿತಾ ಬೆರಗುಗೊಳಿಸುತ್ತದೆ!

ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಖುನ್ ಹಾನ್‌ ಪಟ್ಟಣದಲ್ಲಿರುವ ಬೌದ್ಧ ದೇವಾಲಯವು ಅದರ ಪ್ರಾಚೀನ ಇತಿಹಾಸ ಅಥವಾ ಆಧ್ಯಾತ್ಮಿಕ ವಿಧಿಗಳಿಗಾಗಿ ಅಲ್ಲ, ಬದಲಾಗಿ ಅದನ್ನು ಬೆಂಬಲಿಸುವ ಗೋಡೆಗಳಿಂದಾಗಿ ವಿಶಿಷ್ಟವಾಗಿದೆ! ‘ವಾಟ್ ಪಾ ಮಹಾ ಚೆಡಿ ಕೈವ್’ ಅಥವಾ ‘ಒಂದು ಮಿಲಿಯನ್ ಬಾಟಲಿಗಳ ದೇವಾಲಯ’ವು ಬಹುತೇಕ ಸಂಪೂರ್ಣವಾಗಿ ಬಿಯರ್ ಬಾಟಲಿಗಳಿಂದಲೇ ನಿರ್ಮಿಸಲ್ಪಟ್ಟಿದೆ.

Untitled design - 2026-09-15T160005.017

ಒಂದುವರೆ ಮಿಲಿಯನ್‌ಗಿಂತಲೂ ಹೆಚ್ಚು ಬಾಟಲಿ ಬಳಕೆ

ಈ ದೇವಾಲಯದ ವಿವಿಧ ಘಟಕಗಳನ್ನು 1.5 ಮಿಲಿಯನ್‌ಗಿಂತಲೂ ಹೆಚ್ಚು ಗಾಜಿನ ಬಾಟಲಿಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ಬಾಟಲಿಗಳನ್ನು ಕಾಂಕ್ರೀಟ್‌ನಿಂದ ಒಟ್ಟಿಗೆ ಜೋಡಿಸಲಾಗಿದೆ ಮತ್ತು ರಚನೆಗಳ ಒಳಗೆ ಮತ್ತು ಹೊರಗೆ ಸುಂದರವಾದ ವಿನ್ಯಾಸಗಳಲ್ಲಿ ಇರಿಸಲಾಗಿದೆ. ಸಿಸಾಕೆಟ್ ಪ್ರಾಂತ್ಯದ ಬೌದ್ಧ ಸನ್ಯಾಸಿಗಳ ಗುಂಪೊಂದು 1980ರ ದಶಕದಲ್ಲಿ ಹಳ್ಳಿಗಳಲ್ಲಿನ ಕಸದ ಸಮಸ್ಯೆಯನ್ನು ಪರಿಹರಿಸಲು ವಿಶಿಷ್ಟ ದೇಗುಲದ ಯೋಜನೆಯೊಂದನ್ನು ರೂಪಿಸಿತು. ಹೆಚ್ಚುತ್ತಿರುವ ಗಾಜಿನ ಬಾಟಲಿ ತ್ಯಾಜ್ಯದ ಬಗ್ಗೆ ಅವರು ಕಳವಳಗೊಂಡು ಜನರು ಬಳಸಿ ಬಿಸಾಡಿದ ಬಾಟಲಿಗಳನ್ನು ಸಂಗ್ರಹಿಸಿ ಕಟ್ಟಡ ಸಾಮಗ್ರಿಗಳಾಗಿ ಪರಿವರ್ತಿಸಲು ನಿರ್ಧರಿಸಿದರು. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಹಸಿರು ಜೀವನಶೈಲಿಯನ್ನು ಉತ್ತೇಜಿಸಲು ದೇಗುಲವನ್ನು ನಿರ್ಮಿಸಿದರು.

ಇದನ್ನೂ ಓದಿ : ಥೈಲ್ಯಾಂಡಿನ ಈ ಅಚ್ಚರಿಯ ತಾಣಗಳಿಗೆ ಭೇಟಿಕೊಡಲು ಮರೆಯದಿರಿ..

ಆ ಸನ್ಯಾಸಿಗಳು ‘ಗೋಡೆಯ ಮೇಲೆ 100 ಬಿಯರ್ ಬಾಟಲಿಗಳು’ ಎಂಬ ಸವಾಲ್‌ ಅನ್ನು ಪ್ರಾರಂಭಿಸಿದರು ಮತ್ತು ಸ್ಥಳೀಯರು ಮತ್ತು ಅಂಗಡಿ ಮಾಲೀಕರಿಂದ ಬಳಸಿದ ಬಾಟಲಿ ದೇಣಿಗೆಗಳನ್ನು ಕೋರಿದರು. ಅವರು ತಮ್ಮ ಸಮುದಾಯದ ಸ್ಮಶಾನದಲ್ಲಿ ಗಾಜಿನ ಬಾಟಲಿಗಳಿಂದ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದರು. ಆ ಬಾಟಲಿಗಳನ್ನು ಕೇವಲ ಎರಡು ವರ್ಷಗಳಲ್ಲಿ ಸುಂದರವಾದ ಗಾಜಿನ ದೇವಾಲಯವಾಗಿ ಮರುಬಳಕೆ ಮಾಡಲಾಯಿತು.

ಸ್ಥಳೀಯ ಸರಕಾರದ ಸಹಾಯದ ಜತೆಗೆ ನಾಗರಿಕರು ತಾವು ಬಳಸಿದ ಬಾಟಲಿಗಳನ್ನು ಸನ್ಯಾಸಿಗಳಿಗೆ ದಾನ ಮಾಡಲು ಪ್ರಾರಂಭಿಸಿದರು. ದೇವಾಲಯ ಸಂಕೀರ್ಣವು ಸುಮಾರು 20 ಕಟ್ಟಡಗಳನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಪ್ರಾರ್ಥನಾ ಮಂದಿರ, ಸ್ಮಶಾನ, ಸ್ನಾನಗೃಹಗಳು ಮತ್ತು ನೀರಿನ ಗೋಪುರ ಸೇರಿವೆ.ಈ ಕಟ್ಟಡಗಳನ್ನು ನಿರ್ಮಿಸಲು 1.5 ದಶಲಕ್ಷಕ್ಕೂ ಹೆಚ್ಚು ಗಾಜಿನ ಬಾಟಲಿಗಳನ್ನು ಬಳಸಲಾಗಿದೆ.

Untitled design - 2026-09-15T160410.714

ಸೂರ್ಯನ ಬೆಳಕಿನಿಂದ ಇನ್ನಷ್ಟು ಮೆರಗು

ಕಂದು ಬಣ್ಣದ ಚಾಂಗ್ ಮತ್ತು ಹಸಿರು ಹೈನೆಕೆನ್ ಬಿಯರ್‌ ಬಾಟಲಿಗಳಿಂದ ಮಾಡಿರುವ ಗೋಡೆಗಳ ಮೂಲಕ ಸೂರ್ಯನ ಬೆಳಕು ಬಿದ್ದಾಗ ದೇವಾಲಯವು ಹೊಳೆಯುತ್ತದೆ. ಬಾಟಲಿಗಳನ್ನು ಒಟ್ಟಿಗೆ ಹಿಡಿದಿಡಲು ಕಾಂಕ್ರೀಟ್ ಅನ್ನು ಮತ್ತು ದೇವಾಲಯದ ಒಳಗೆ ಕಲಾಕೃತಿ ಮತ್ತು ಅಲಂಕಾರಿಕ ಮೊಸಾಯಿಕ್‌ಗಳನ್ನು ತಯಾರಿಸಲು ಮುಚ್ಚಳಗಳನ್ನು ಸಹ ಬಳಸಲಾಗಿದೆ. ಬೌದ್ಧರಿಗೆ ಪವಿತ್ರ ದೀಕ್ಷೆ ನೀಡುವ ಉಬೋಸೊಟ್ ಎಂದು ಕರೆಯಲ್ಪಡುವ ಸಭಾಂಗಣವು ಮೀನುಗಳಿಂದ ತುಂಬಿದ ಸಣ್ಣ ಸರೋವರದಲ್ಲಿದೆ. ಈ ರಚನೆಯು ಹಸಿರು ಮತ್ತು ಕಂದು ಬಣ್ಣದ ಗಾಜಿನ ಬಾಟಲಿಗಳನ್ನು ನೆಲದಲ್ಲಿ ಹುದುಗಿಸಿ ಮಾಡಲಾಗಿರುವ ಸೇತುವೆಯಿಂದ ಸಂಪರ್ಕ ಹೊಂದಿದೆ. ಇಲ್ಲಿ ಒರಗಿಕೊಳ್ಳುವ ಭಗವಾನ್ ಬುದ್ಧನ ಪ್ರತಿಮೆ ಇದೆ ಜತೆಗೆ ಪ್ರಸಿದ್ಧ ಸನ್ಯಾಸಿಗಳ ಹಲವಾರು ಸಣ್ಣ-ಸಣ್ಣ ಪ್ರತಿಮೆಗಳಿವೆ.

ಇದನ್ನೂ ಓದಿ : ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್‌ನ ಹೊಸ ನಿಯಮ

ಬೌದ್ಧರು ಪ್ರಾರ್ಥನೆ ಸಲ್ಲಿಸಲು ಈ ಮಂಟಪದೊಳಗಿನ ದೇವಾಲಯದಲ್ಲಿ ಸೇರುತ್ತಾರೆ. ಚೆಡಿ ಎನ್ನುವ ಸಣ್ಣ ಸ್ತೂಪವು ಕಂದು ಬಾಟಲಿಗಳಿಂದ ಕೂಡಿದ್ದು, ಕೆಲವು ಕಿಟಕಿ ಆಕಾರದ ಮೊಸಾಯಿಕ್ ತುಣುಕುಗಳನ್ನು ಹೊಂದಿದೆ. ಸ್ಮಶಾನ ಕಟ್ಟಡದ ಬಹುಪಾಲು ಭಾಗವು ಕಂದು ಬಾಟಲಿಗಳಿಂದ ಮುಚ್ಚಲ್ಪಟ್ಟಿದೆ ಆದರೆ, ರೇಲಿಂಗ್‌ಗಳು ಹಸಿರು ಬಾಟಲಿಗಳಿಂದ ಮಾಡಲ್ಪಟ್ಟಿದೆ.

ಸಾಧಾರಣ ಮರುಬಳಕೆ ಉಪಕ್ರಮವಾಗಿ ಪ್ರಾರಂಭವಾದದ್ದು, ಈಗ ಸಂಪೂರ್ಣವಾಗಿ ಕ್ರಿಯಾತ್ಮಕ ಪೂಜಾ ಮಂದಿರವಾಗಿ ಮತ್ತು ಸುಸ್ಥಿರತೆಯ ದಾರಿದೀಪವಾಗಿ ಬೆಳೆದಿದೆ. ಈ ಅಸಾಮಾನ್ಯ ವಾಟ್ ಪ ಮಹಾ ಚೆಡಿ ಕೈವ್ ದೇವಾಲಯವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಅದ್ಭುತ ಸೌಂದರ್ಯದಿಂದಾಗಿ ಮಾತ್ರವಲ್ಲದೆ ನಾವೀನ್ಯತೆ ಮತ್ತು ಆಧ್ಯಾತ್ಮಿಕತೆಯು ಸಹಬಾಳ್ವೆ ನಡೆಸಿರುವ ರೀತಿಗಾಗಿಯೂ ಸಹ.

Untitled design - 2026-09-15T160303.127

ದಾರಿ ಹೇಗೆ?

ಮಿಲಿಯನ್ ಬಾಟಲ್ ದೇವಾಲಯವನ್ನು ಆರಾಮವಾಗಿ ತಲುಪಲು ನೀವು ಹತ್ತಿರದ ಉಬೊನ್ ರಾಟ್ಚಥಾನಿ ಅಥವಾ ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ಬರಬಹುದು. ಇಲ್ಲಿಂದ ರೈಲು ಅಥವಾ ಬಸ್‌ನಲ್ಲಿ ಸಿಸಾಕೆಟ್ ಪ್ರಾಂತ್ಯವನ್ನು ತಲುಪಬಹುದು. ಸಿಸಾಕೆಟ್ ರೈಲು ನಿಲ್ದಾಣವು ಪಟ್ಟಣದ ಹೃದಯಭಾಗದಲ್ಲಿದೆ ಮತ್ತು ಬಸ್ ನಿಲ್ದಾಣವನ್ನು ತಲುಪುವುದು ಸುಲಭ. ಅಲ್ಲಿಂದ ನೀವು ಖುನ್ ಹಾನ್‌ಗೆ ಮುಂದುವರಿಯಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!