ಇಲ್ಲಿನ ಶಿವನಿಗೆ ಏಡಿ ಅರ್ಪಿಸಿದರೆ ಒಲಿಯುತ್ತಾನೆ!
ರಾಮನಾಥ ಶಿವ ಘೆಲಾ ದೇವಸ್ಥಾನದಲ್ಲಿ ಭಕ್ತರು ಏಡಿಗಳನ್ನು ದೇವರಿಗೆ ಅರ್ಪಿಸುತ್ತಾರೆ. ಈ ದೇವಾಲಯವು ಸೂರತ್ನ ಉಮ್ರಾ ಗ್ರಾಮದಲ್ಲಿದೆ.
ಪ್ರತಿ ದೇವಾಲಯದಲ್ಲಿಯೂ ಭಕ್ತಾದಿಗಳು ದೇವರಿಗೆ ಹೂವು,ಹಣ್ಣನ್ನು ಅರ್ಪಿಸುತ್ತಾರೆ. ಆದರೆ ವಿಚಿತ್ರವೆಂದರೆ ಈ ದೇವಸ್ಥಾನವೊಂದರಲ್ಲಿ ಶಿವನಿಗೆ ಭಕ್ತರು ಏಡಿ ಅರ್ಪಿಸುತ್ತಾರೆ. ಹತ್ತಾರು ಏಡಿಗಳನ್ನು ಹಿಡಿದು ತಂದು ಶಿವನಿಗೆ ಸಲ್ಲಿಸುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿಕೆ ಇಡುತ್ತಾರೆ. ಇದೊಂದು ವಿಚಿತ್ರ ಆಚರಣೆ ಅನ್ನಿಸಿದರೂ ಸತ್ಯ.
ಸೂರತ್ನಲ್ಲಿರುವ ಶಿವನ ದೇವಸ್ಥಾನದಲ್ಲಿ, ಪ್ರತಿವರ್ಷ ಆಚರಿಸಲಾಗುವ ಮಕರ ಸಂಕ್ರಾಂತಿಯ ದಿನದಂದು ಶಿವಲಿಂಗಕ್ಕೆ ಭಕ್ತರು ಸಣ್ಣ ಏಡಿಗಳನ್ನು ಅರ್ಪಿಸುತ್ತಾರೆ. ರಾಮನಾಥ ಶಿವ ಘೆಲಾ ದೇವಸ್ಥಾನದಲ್ಲಿ ಭಕ್ತರು ಏಡಿಗಳನ್ನು ಹಿಡಿದು ತಂದು ಅರ್ಪಿಸುತ್ತಾರೆ. ತಮ್ಮ ಧಾರ್ಮಿಕ ಭಾವನೆಗಳನ್ನು ಸಾವಿರಾರು ಭಕ್ತರು ಈ ಮೂಲಕ ಹೊರ ಹಾಕುತ್ತಾರೆ. ರಾಮನಾಥ ಶಿವ ಘೆಲಾ ದೇವಸ್ಥಾನವು ಸೂರತ್ನ ಉಮ್ರಾ ಗ್ರಾಮದಲ್ಲಿದೆ. ಏಡಿಯ ಅರ್ಪಣೆಯಿಂದಾಗಿ ದೇವಾಲಯವು ವಿಶಿಷ್ಟವಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಏಡಿ ಅರ್ಪಣೆ ಏಕೆ?
ಶಿವನಿಗೆ ಏಡಿ ಅರ್ಪಿಸುವುದರ ಹಿಂದೆ ಒಂದು ಪುರಾಣದ ಕತೆಯಿದೆ. ಶ್ರೀರಾಮನು ತನ್ನ ತಂದೆ ದಶರಥನ ತರ್ಪಣ ಕಾರ್ಯವನ್ನು ತಾಪಿ ನದಿ ತೀರದಲ್ಲಿ ನಡೆಸಿದ ನಂತರ ಬಾಣಬಿಟ್ಟನು. ಆ ನಂತರ ಇಲ್ಲಿ ಶಿವಲಿಂಗ ಪ್ರತ್ಯಕ್ಷವಾಯಿತು ಎನ್ನಲಾಗುತ್ತದೆ. ಯಾವುದೇ ವ್ಯಕ್ತಿಯು ಕಿವಿ ನೋವಿನಿಂದ ಬಳಲುತ್ತಿದ್ದರೆ ಒಂದು ಜೀವಂತ ಏಡಿಯನ್ನು ತಂದು ಅರ್ಪಿಸಿದರೆ ರೋಗ ಶಮನವಾಗುತ್ತದೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ಹಬ್ಬದ ದಿನದಂದು ಏಡಿಗಳನ್ನು ಅರ್ಪಿಸುವುದು ಸೂರತ್ನ ರಾಮನಾಥ ಶಿವ ಘೇಲಾ ದೇವಾಲಯದ ಹಳೆಯ ಸಂಪ್ರದಾಯಗಳಲ್ಲಿ ಒಂದಾಗಿದೆ. ದೇವಾಲಯದ ಅರ್ಚಕರು ಹೇಳಿದಂತೆ ಕಥೆ ರಾಮಾಯಣದ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಈ ದೇವಾಲಯವನ್ನು ಭಗವಾನ್ ರಾಮ ಸ್ವತಃ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.
ಒಂದು ದಿನ ಸಮುದ್ರವನ್ನು ದಾಟುವಾಗ, ರಾಮನು ತನ್ನ ಕಾಲುಗಳ ಮೇಲೆ ಓಡಾಡುತ್ತಿದ್ದ ಏಡಿಯನ್ನು ನೋಡಿ ಸಂತೋಷಪಡುತ್ತಾನೆ. ನಂತರ ಏಡಿಯನ್ನೇ ಪೂಜೆಗೆ ಅರ್ಪಿಸಲಾಯಿತು. ಭಕ್ತರು ಅರ್ಪಿಸಿದಂತಹ ಏಡಿಗಳನ್ನು ದೇವಾಲಯದ ಪ್ರಾಧಿಕಾರವು ಸಂಗ್ರಹಿಸಿ ಹತ್ತಿರದ ಸಮುದ್ರದಲ್ಲಿ ಬಿಡಲಾಗುತ್ತದೆ.