ಕಬಿನಿ ಹಿನ್ನೀರಿನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಡಿಕೆಶಿ
ರಾಜಕೀಯದ ಒತ್ತಡದ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಬಿನಿ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಕೊಂಡಾಡಿದ್ದಾರೆ.
ಈಗಂತೂ ಒತ್ತಡದ ಜೀವನದಿಂದ ಹೊರಬರುವುದಕ್ಕೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವುದಕ್ಕೆ ಜನ ಸಾಮಾನ್ಯರಷ್ಟೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯದವರು ಎಲ್ಲರೂ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ತೆರಳುವುದು ಸಾಮಾನ್ಯವಾಗಿದೆ. ಅದರಲ್ಲೂ ವಿದೇಶಿ ಪ್ರವಾಸ, ಬೀಚ್ ಸುತ್ತಾಡಲುಹೋಗುವವರು ಒಂದೆಡೆಯಾದರೆ, ಇನ್ನೂ ಕೆಲವರು ಪರಿಸರ ಪ್ರವಾಸೋದ್ಯಮದತ್ತ ಒಲವು ತೋರುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ, ಇತ್ತೀಚೆಗಷ್ಟೇ ಬಾಲಿವುಡ್ ನಟ ಸುನಿಲ್ ಶೆಟ್ಟಿ ಉತ್ತರಾಖಂಡದ ಫಾಟೊ ಪ್ರವಾಸಿ ವಲಯದಲ್ಲಿ ಜಂಗ್ ಸಫಾರಿ ಕೈಗೊಂಡು ಅರಣ್ಯ ಪ್ರವಾಸವನ್ನು ಆನಂದಿಸಿದ್ದರು. ಸದ್ಯ ಕರ್ನಾಟದಲ್ಲೂ ಇಂತಹದ್ದೇ ಸುದ್ದಿಯೊಂದು ಸದ್ದು ಮಾಡುತ್ತಿದೆ.

ರಾಜಕೀಯದ ಒತ್ತಡದ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ 63ನೇ ಹುಟ್ಟುಹಬ್ಬವನ್ನು (DK Shivakumar Birthday) ಕಬಿನಿ ಹಿನ್ನೀರಿನ ಸುಂದರ ನೈಸರ್ಗಿಕ ತಾಣದಲ್ಲಿ ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಕೆಶಿ ಅವರು, ಈ ವರ್ಷದ ಹುಟ್ಟುಹಬ್ಬವನ್ನು(ಮೇ 15ರಂದು) ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು ಎಂದು ತಿಳಿಸಿದ್ದಾರೆ.

ಇನ್ನು ಕಬಿನಿಯಲ್ಲಿ ಕಳೆದ ಸಮಯದ ಬಗ್ಗೆ ಪೋಸ್ಟ್ ಮಾಡಿರುವ ಡಿಕೆಶಿ ಅವರು, ಕಬಿನಿ ನಾ ನಿನ್ನ ಅಭಿಮಾನಿ! 200ರಷ್ಟು ಆನೆಗಳು, ಅಸಂಖ್ಯಾತ ಜಿಂಕೆಗಳನ್ನು ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಣ್ತುಂಬಿಕೊಂಡೆ - ಏನದ್ಭುತವಾದ ದೃಶ್ಯವದು!. ಕರ್ನಾಟಕದ ಅರಣ್ಯ ಸಂಪತ್ತಿನ ಆಗರವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಬಿನಿ ಅಭಯಾರಣ್ಯವನ್ನು ಜೀವನದಲ್ಲಿ ಒಂದು ಬಾರಿಯಾದರೂ ಎಲ್ಲರೂ ನೋಡಲೇ ಬೇಕು. ಬನ್ನಿ ಕಬಿನಿಗೆ - ಪ್ರಕೃತಿಯೊಂದಿಗೆ ಒಂದಾಗಿರಿ ಎಂದು ಕರೆ ನೀಡಿದ್ದಾರೆ.