ನಾಳೆಯಿಂದ ಕೇದಾರನಾಥ ದೇವಾಲಯಕ್ಕೆ ಪ್ರವೇಶ!
ಕೇದಾರನಾಥ ಧಾಮದ ಸಮಿತಿ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ನೂರಾರು ಭಕ್ತರ ಉಪಸ್ಥಿತಿಯಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲನ್ನು 2025ರ ಮೇ 2ರಂದು ಶುಕ್ರವಾರ ತೆರೆಯಲಾಗುವುದು ಎಂದು ನಿರ್ಧರಿಸಲಾಗಿತ್ತು
ಕೇದಾರನಾಥ ದೇವಾಲಯವನ್ನು ಮೇ2 ರಂದು ತೆರೆಯಲಾಗುತ್ತಿದೆ. ಪುರಾಣ ಪ್ರಸಿದ್ಧ ದೇವಾಲಯವಾಗಿ ಕೋಟ್ಯಂತರ ಭಕ್ತರನ್ನು ಸೆಳೆಯುವ ಕೇದಾರನಾಥಕ್ಕೆ ನಾಳೆಯಿಂದ ಭಕ್ತಾದಿಗಳು ಬರಲಿದ್ದಾರೆ ಎಂಬ ಮಾಹಿತಿಯಿದೆ.
ಫೆಬ್ರವರಿ 26ರಂದು ಕೇದಾರನಾಥ ಧಾಮದ ಸಮಿತಿ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ನೂರಾರು ಭಕ್ತರ ಘನ ಉಪಸ್ಥಿತಿಯಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲನ್ನು 2025ರ ಮೇ 2ರಂದು ಶುಕ್ರವಾರ ತೆರೆಯಲಾಗುವುದು ಎಂದು ನಿರ್ಧರಿಸಲಾಗಿತ್ತು. ಮಿಥುನ ಮತ್ತು ವೃಷಭ ಲಗ್ನದಲ್ಲಿ ಬೆಳಗ್ಗೆ 7 ಗಂಟೆಗೆ ಭಕ್ತರಿಗೆ ಕೇದಾರನಾಥನ ದರ್ಶನವನ್ನು ಪಡೆದುಕೊಳ್ಳಲು ಬಾಗಿಲನ್ನು ತೆರೆಯಲಾಗುತ್ತದೆ. ಕೇದಾರನಾಥ ದೇವಾಲಯದ ಬಾಗಿಲು ತೆರೆಯುವ ಶುಭ ಸಮಯ ಘೋಷಣೆಯಾಗುವುದರೊಂದಿಗೆ, ಗರ್ವಾಲ್ ಹಿಮಾಲಯದಲ್ಲಿರುವ ನಾಲ್ಕು ಪವಿತ್ರ ಸ್ಥಳಗಳನ್ನು ತೆರೆಯುವ ದಿನಾಂಕವನ್ನು ಕೂಡ ನಿರ್ಧರಿಸಲಾಗಿತ್ತು.
ಕೇದಾರನಾಥ ದೇವಾಲಯ
ಹಿಮಾಲಯದಲ್ಲಿರುವ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಕೇದರನಾಥ ಕೂಡ ಒಂದು. ಕೇದರನಾಥ ಮಂದಿರ ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಹಿಮಾಲಯದಲ್ಲಿನ ಹವಾಮಾನ ವೈಪರಿತ್ಯದಿಂದಾಗಿ ಈ ದೇವಸ್ಥಾನವನ್ನು 6 ತಿಂಗಳುಗಳವರೆಗೆ ಮುಚ್ಚಲಾಗುತ್ತದೆ ಹಾಗೂ 6 ತಿಂಗಳುಗಳವರೆಗೆ ತೆರೆಯಲಾಗುತ್ತದೆ. ಇಲ್ಲಿ ನಡೆಯುವ ನಂದಾದೀಪ ಆಚರಣೆಯನ್ನು ನೋಡಲು ಲಕ್ಷಾಂತರ ಭಕ್ತರು ಸೇರುತ್ತಾರೆ. ನಂದಾದೀಪವನ್ನು ನೋಡಿದರೆ ಶಿವನು ಆಶೀರ್ವದಿಸುತ್ತಾನೆಂಬ ನಂಬಿಕೆಯಿದೆ. ಇದು ಪವಿತ್ರವಾದ ಛೋಟಾ ಚಾರ್ಧಾಮ್ ಯಾತ್ರೆಯಲ್ಲಿ ಭೇಟಿ ನೀಡುವ ಒಂದು ಪ್ರಮುಖ ಸ್ಥಳವಾಗಿದೆ. 8ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಜ್ಯೋತಿರ್ಲಿಂಗವನ್ನು ಹೊಂದಿದೆ. ಇಲ್ಲಿ ಶಿವನನ್ನು ಆರಾಧಿಸಿದರೆ ನಮ್ಮೆಲ್ಲಾ ದುಃಖವು ದೂರಾಗುತ್ತದೆ. ಇದು ಅತ್ಯಂತ ಹಳೆಯ ದೇವಾಲಯವಾಗಿದ್ದು, ಈ ದೇವಾಲಯದ ಕುರಿತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಪಾಂಡವರು ತಮ್ಮ ಪಾಪಕ್ಕೆ ಪ್ರಾಯಶ್ಚಿತವನ್ನು ಕಂಡುಕೊಳ್ಳಲು ಶಿವನನ್ನು ಇಲ್ಲಿ ಕಠಿಣ ತಪಸ್ಸಿನ ಮೂಲಕ ಒಲಿಸಿಕೊಂಡರೆಂದು ಹೇಳಲಾಗುತ್ತದೆ.