ಆಪರೇಷನ್ ಸಿಂದೂರ್: ಪರಿಸ್ಥಿತಿ ಹದಗೆಡುತ್ತಿದ್ದಂತೆ, ಲಡಾಖ್ ಹೋಟೆಲ್ಗಳಿಂದ ಪ್ರವಾಸಿಗರಿಗೆ ಉಚಿತ ವಾಸ್ತವ್ಯ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ನಂತರ, ಸದ್ಯ ಲಡಾಖ್ನಲ್ಲಿರುವ ಹೋಟೆಲ್ಗಳು ಪ್ರವಾಸಿಗರ ನೆರವಿಗೆ ಬಂದಿದೆ. ಸಿಲುಕಿಕೊಂಡಿರುವ ಪ್ರವಾಸಿಗರಿಗೆ ಉಚಿತ ವಾಸ್ತವ್ಯವನ್ನು ನೀಡಲು ಮುಂದಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ತೀರಾ ಹದಗೆಡುತ್ತಿದ್ದು, ವಿಮಾನ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ಆಲ್ ಲಡಾಖ್ ಹೋಟೆಲ್ ಮತ್ತು ಅತಿಥಿ ಗೃಹ ಸಂಘ (All Ladakh Hotel and Guest House Association - ALHAGHA) ಈ ಪ್ರದೇಶದಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಉಚಿತ ವಸತಿ ಸೌಕರ್ಯವನ್ನು ನೀಡಲು ಮುಂದಾಗಿದೆ. ವರದಿಗಳ ಪ್ರಕಾರ, ಸಂಘದ ತುರ್ತು ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ಯುದ್ಧ, ಪ್ರಾಕೃತಿಕ ವಿಓಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ, ಅನಿರೀಕ್ಷಿತ ಸವಾಲುಗಳ ಸಂದರ್ಭದಲ್ಲಿ ಅತಿಥಿಗಳ ಕಾಳಜಿ ವಹಿಸಿ, ಅವರಿಗೆ ಬೆಂಬಲವನ್ನು ನೀಡುವುದು ಹಾಸ್ಪಿಟಾಲಿಟಿ ಇಂಡಸ್ಟ್ರಿಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿಮಾನಗಳನ್ನು ರದ್ದುಗೊಂಡು ಗೊಂದಲಕ್ಕೀಡಾದ ಪ್ರವಾಸಿಗರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅವರು ಈಗಾಗಲೇ ಚೆಕ್ ಇನ್ ಮಾಡಲಾದ ಅದೇ ಹೋಟೆಲ್ಗಳಲ್ಲಿ ಉಳಿಯಲು ಅವಕಾಶ ನೀಡಲಾಗುವುದಾಗಿ ಆಲ್ ಲಡಾಖ್ ಹೋಟೆಲ್ ಮತ್ತು ಅತಿಥಿ ಗೃಹ ಸಂಘ ಹೇಳಿಕೆ ನೀಡಿದೆ. ಅಲ್ಲದೆ ಈ ನಿರ್ಧಾರಕ್ಕೆ ಸಂಪೂರ್ಣವಾಗಿ ಸಹಕರಿಸಿ ತೊಂದರೆಗೊಳಗಾದ ಪ್ರವಾಸಿಗರಿಗೆ ನೆರವು ನೀಡುವಂತೆ ಸಂಘ ತನ್ನ ಸದಸ್ಯರಿಗೆ ಹೇಳಿದೆ.
ಆಪರೇಷನ್ ಸಿಂದೂರ್ ನಂತರ, ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವುದರಿಂದ ಲೇಹ್ ನಿಂದ ಭುಜ್ ಗೆ ವಿಮಾನ ಹಾರಾಟವನ್ನು ಅನೇಕ ದೇಶೀಯ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ. ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಆಕಾಶ ಏರ್ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳನ್ನು ರದ್ದುಗೊಳಿಸಿದ್ದು, ಧರ್ಮಶಾಲಾ, ಜಮ್ಮು, ಶ್ರೀನಗರ, ಲೇಹ್, ಜೋಧ್ ಪುರ, ಭುಜ್ ಮತ್ತು ಅಮೃತಸರಗಳಿಗೆ ವಿಮಾನ ಹಾರಾಟಕ್ಕೂ ಅಡ್ಡಿಯಾಗಿದೆ.

"ಈಗಿನ ಪರಿಸ್ಥಿತಿಯಿಂದಾಗಿ, ಧರ್ಮಶಾಲಾ (DHM), ಲೇಹ್ (IXL), ಜಮ್ಮು (IXJ), ಶ್ರೀನಗರ (SXR), ಮತ್ತು ಅಮೃತಸರ (ATQ) ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿನ ವಿಮಾನ ನಿಲ್ದಾಣಗಳನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗಿದೆ. ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಸಿದ್ಧರಾಗಿ” ಎಂದು ಇಂಡಿಗೋ X ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.