ಆಪರೇಷನ್ ಸಿಂದೂರ್: ರೈಲ್ವೆ ಇಲಾಖೆಯಿಂದ ಐದು ವಿಶೇಷ ರೈಲುಗಳ ಸಂಚಾರ!
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಿಮದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಇದರಲ್ಲಿ ವಂದೇ ಭಾರತ್ ರೈಲಿನ ನಿಯೋಜನೆಯೂ ಸೇರಿದೆ ಎಂಬ ಮಾಹಿತಿಯಿದೆ..
ಪಾಕಿಸ್ತಾನದ ಭಯೋತ್ಪಾದಕರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ನಡೆಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಸಂಘರ್ಷ ನಡೆಯುತ್ತಲೇ ಇದೆ. ಈ ಮಧ್ಯೆ ಗಡಿ ನಗರಗಳಾದ ಜಮ್ಮು, ಉಧಂಪುರ ಮತ್ತು ಪಠಾಣ್ಕೋಟ್ಗಳಿಂದ ಸಿಲುಕಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಈ ಘೋಷಣೆಯನ್ನು ಶುಕ್ರವಾರ, ಮೇ 9 ರಂದು ಮಾಡಲಾಗಿದ್ದು, ಇದರಲ್ಲಿ ವಂದೇ ಭಾರತ್ ರೈಲಿನ ನಿಯೋಜನೆಯೂ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಉಧಂಪುರದಿಂದ ದೆಹಲಿಗೆ ಬಹು ವಿಶೇಷ ರೈಲುಗಳು ಸಂಚರಿಸಲಿವೆ ಎಂಬ ಮಾಹಿತಿಯಿದೆ. ಮೇ 9, ಶುಕ್ರವಾರ ಬೆಳಗ್ಗೆ 10:45 ಕ್ಕೆ ಜಮ್ಮುವಿನಿಂದ ದೆಹಲಿಗೆ ಹೊರಟ ವಿಶೇಷ ರೈಲು, ಪಠಾಣ್ಕೋಟ್ನಲ್ಲಿ ನಿಲ್ದಾಣ ತಲುಪಿದೆ. ಮೇ 9 ರಂದು ಸಂಜೆ 7 ಗಂಟೆಗೆ ಜಮ್ಮುವಿನಿಂದ ದೆಹಲಿಗೆ ಮತ್ತೊಂದು ವಿಶೇಷ ರೈಲು ಕೂಡ ಹೊರಟಿದೆ. ನಾಲ್ಕನೇ ವಿಶೇಷ ರೈಲು ಮೇ 10 ರಂದು ಬೆಳಗ್ಗೆ 11:05 ಕ್ಕೆ ಉಧಂಪುರದಿಂದ ಹೊರಟು, ಜಮ್ಮು, ಕಥುವಾ ಮತ್ತು ಪಠಾಣ್ಕೋಟ್ ಕಂಟೋನ್ಮೆಂಟ್ ಮೂಲಕ ದೆಹಲಿಗೆ ಪ್ರಯಾಣಿಸಿದೆ.
ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಮತ್ತು ಬಿಹಾರದ ಮೂಲಕ ಹಾದುಹೋಗುವ, ಹೆಚ್ಚಾಗಿ ಕಾಯ್ದಿರಿಸದ ರೈಲು ರಾತ್ರಿ 11:55 ಕ್ಕೆ ಜಮ್ಮುವಿನಿಂದ ಗುವಾಹಟಿಗೆ ಹೊರಟಿದೆ. ಇದಲ್ಲದೆ ವಂದೇ ಭಾರತ್ ರೈಲು ಮಧ್ಯಾಹ್ನ 12:45 ಕ್ಕೆ ಉಧಂಪುರದಿಂದ ಹೊರಡಲು ವ್ಯವಸ್ಥೆ ಮಾಡಲಾಗಿತ್ತು. ಇದು ಜಮ್ಮು ಮತ್ತು ಪಠಾಣ್ಕೋಟ್ ಮೂಲಕವೂ ಪ್ರಯಾಣಿಸಲಿದ್ದು, ಉತ್ತರ ಜಿಲ್ಲೆಗಳು ಮತ್ತು ರಾಷ್ಟ್ರ ರಾಜಧಾನಿಯ ನಡುವೆ ಸಂಪರ್ಕ ಸಾಧಿಸುತ್ತದೆ.