Tuesday, September 9, 2025
Tuesday, September 9, 2025

ಆದಿಶಂಕರರು ಭೇಟಿ ನೀಡಿದ್ದ ಮಹಾಲಕ್ಷ್ಮಿ ದೇವಾಲಯ!

ಇಲ್ಲಿಯ ಮಹಾಲಕ್ಷ್ಮಿ ದೇವಿಯ ಮೂರ್ತಿ ಸ್ವಯಂಭೂವಾಗಿ ಇಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆಯಿಂದಾಗಿ ಭಕ್ತರಲ್ಲಿ ಅಪಾರ ನಂಬಿಕೆಯನ್ನು ಹುಟ್ಟುಹಾಕಿದೆ. ಅದಿಶಂಕರಾಚಾರ್ಯರು ಕೂಡ ತಮ್ಮ ಪಾದಯಾತ್ರೆಯ ವೇಳೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರೆಂಬ ತಾತ್ವಿಕ ದಾಖಲೆಗಳಿವೆ.

  • ಡಾ. ಕೆ.ಬಿ. ಸೂರ್ಯ ಕುಮಾರ್, ಮಡಿಕೇರಿ

ಮಹಾರಾಷ್ಟ್ರದ ಕೊಲ್ಹಾಪುರದ ಹೃದಯಭಾಗದಲ್ಲಿ ನೆಲೆಸಿರುವ ಅಂಬಾಬಾಯಿ ದೇವಸ್ಥಾನ ಅಥವಾ ಮಹಾಲಕ್ಷ್ಮಿ ದೇವಾಲಯವು ಭಾರತದ ಪ್ರಸಿದ್ಧ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು, ಲಕ್ಷ್ಮಿ ದೇವಿಯ ಈ ರೂಪವು ಸಕಾಲಿಕವಾದ ಐಶ್ವರ್ಯ, ಧರ್ಮ ಮತ್ತು ಧೈರ್ಯದ ಸಂಕೇತವೆಂದು ಪರಿಗಣಿತವಾಗಿದೆ. ಶ್ರದ್ಧೆ ಮತ್ತು ಇತಿಹಾಸದ ಮಿಲನ ಬಿಂದು ಆಗಿರುವ ಈ ದೇವಾಲಯವು ಸಾವಿರಾರು ವರ್ಷಗಳ ಹಿಂದಿನ ವಾಸ್ತುಶೈಲಿಯನ್ನು ಹಾಗೂ ಅಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುತ್ತದೆ. ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ದೇವಾಲಯವು ಭಾರತದಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

Kolhapur

ದೇವಾಲಯದ ಇತಿಹಾಸ ಮತ್ತು ಮಹತ್ವ

ಈ ದೇವಾಲಯವು ಕ್ರಿ.ಶ. 7ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟಿತು ಎಂದು ನಂಬಲಾಗಿದೆ. ನಂತರದ ಶತಮಾನಗಳಲ್ಲಿ ಹಲವು ರಾಜವಂಶಗಳು, ವಿಶೇಷವಾಗಿ ಶಿಲಾಹಾರರು, ಯಾದವರು ಮತ್ತು ಮರಾಠರು ಇದರ ವಿಸ್ತರಣೆ ಮತ್ತು ನವೀಕರಣಕ್ಕೆ ಕೊಡುಗೆ ನೀಡಿದ್ದಾರೆ.

ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ಜನರ ಅಚಲ ನಂಬಿಕೆ. ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಇಲ್ಲಿಯ ಮಹಾಲಕ್ಷ್ಮಿ ದೇವಿಯ ಮೂರ್ತಿ ಸ್ವಯಂಭೂವಾಗಿ ಇಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆಯಿಂದಾಗಿ ಭಕ್ತರಲ್ಲಿ ಅಪಾರ ನಂಬಿಕೆಯನ್ನು ಹುಟ್ಟುಹಾಕಿದೆ. ಅದಿಶಂಕರಾಚಾರ್ಯರು ಕೂಡ ತಮ್ಮ ಪಾದಯಾತ್ರೆಯ ವೇಳೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರೆಂಬ ತಾತ್ವಿಕ ದಾಖಲೆಗಳಿವೆ.

ವಾಸ್ತುಶಿಲ್ಪದ ವೈಭವ

ಈ ದೇವಾಲಯದ ವಾಸ್ತುಶಿಲ್ಪವು ದ್ರಾವಿಡ ಮತ್ತು ಹೇಮಾಡ್ಪಂಥಿ ಶೈಲಿಗಳ ಮಿಶ್ರಣವನ್ನು ಹೊಂದಿದೆ. ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಈ ದೇವಾಲಯವು ಸೂಕ್ಷ್ಮ ಕೆತ್ತನೆಗಳು, ಭವ್ಯ ಗೋಪುರಗಳು, ವಿಸ್ತಾರವಾದ ಮಂಟಪಗಳು ಮತ್ತು ಕಲಾತ್ಮಕ ವಿನ್ಯಾಸಗಳಿಂದ ಕೂಡಿದೆ.

ಮೊದಲು ಕಾಣ ಸಿಗುವುದು ಸಿಂಹ ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಪ್ರವೇಶದ್ವಾರ.

ದೇವಾಲಯದ ಪ್ರಮುಖ ಭಾಗದ ಗರ್ಭಗುಡಿಯಲ್ಲಿ ಮೂರಡಿಗಿಂತ ಹೆಚ್ಚು ಎತ್ತರದ ಮಹಾಲಕ್ಷ್ಮಿ ದೇವಿಯ ಶಿಲಾಮೂರ್ತಿಯಿದೆ. ಅದು ನಾಲ್ಕು ಕೈಗಳನ್ನು ಹೊಂದಿದ್ದು ಕೈಯಲ್ಲಿ ಗದೆ, ಹಣ್ಣು, ಗುರಾಣಿ ಮತ್ತು ಬಟ್ಟಲು ಇದೆ. ದೇವಿಯ ಮೂರ್ತಿಯು ಅಮೂಲ್ಯ ಆಭರಣಗಳಿಂದ ಅಲಂಕೃತವಾಗಿದೆ.

kolhapur 2

ದೇವಾಲಯದ ಆವರಣದಲ್ಲಿ ಇನ್ನೂ ಹಲವು ಸಣ್ಣ ದೇವಾಲಯಗಳಿವೆ. ಇವುಗಳಲ್ಲಿ ಮಹಾಸರಸ್ವತಿ ಮತ್ತು ಮಹಾಕಾಳಿ ದೇವಾಲಯಗಳು ಪ್ರಮುಖವಾಗಿವೆ. ಇವುಗಳಲ್ಲದೆ ವಿಷ್ಣು, ಶಂಕರ, ನವಗ್ರಹ, ಸೂರ್ಯ ದೇವರು ಸೇರಿದಂತೆ ಹಲವಾರು ಉಪದೇವಾಲಯಗಳಿವೆ. ದೇವಾಲಯದ ಆವರಣದಲ್ಲಿರುವ 'ಮಣಿಕರ್ಣಿಕಾ ಕುಂಡ' (ಪವಿತ್ರ ಕೊಳ) ಕೂಡ ಭಕ್ತರಿಗೆ ಸ್ನಾನ ಮಾಡಲು ಒಂದು ಪ್ರಮುಖ ಸ್ಥಳವಾಗಿದೆ.

ಪ್ರಮುಖ ಹಬ್ಬಗಳು ಮತ್ತು ಆಚರಣೆಗಳು

ನವರಾತ್ರಿ: ಇದು ಮಹಾಲಕ್ಷ್ಮಿ ದೇವಾಲಯದಲ್ಲಿ ಆಚರಿಸಲಾಗುವ ಅತಿ ದೊಡ್ಡ ಹಬ್ಬ. ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಾಲಯವನ್ನು ದೀಪಗಳಿಂದ ಅಲಂಕರಿಸಿ, ವಿಶೇಷ ಪೂಜೆ, ಹೋಮ ಹವನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡುವುದು ಒಂದು ವಿಶಿಷ್ಟ ಅನುಭವ.

ಕಿರಣೋತ್ಸವ: ಪ್ರತಿವರ್ಷ ಜನವರಿ, ಫೆಬ್ರುವರಿ ಮತ್ತು ನವೆಂಬರ್ ತಿಂಗಳಲ್ಲಿ, ದಿನದ ನಿಶ್ಚಿತ ವೇಳೆಯಲ್ಲಿ ಸೂರ್ಯರಶ್ಮಿಗಳು ನೇರವಾಗಿ ದೇವಿಯ ಮುಖದ ಮೇಲೆ ಬೀಳುವ ವಿಶಿಷ್ಟವಾದ ಶಿಲ್ಪ ವೈಜ್ಞಾನಿಕ ವಿದ್ಯಮಾನ ಇಲ್ಲಿ ಕಂಡು ಬರುತ್ತದೆ. ಇದು ದೈವಿಕ ಶಕ್ತಿಯ ಸಂಕೇತವೆಂದು ನಂಬಲಾಗಿದೆ ಮತ್ತು ಈ ವಿದ್ಯಮಾನವನ್ನು ವೀಕ್ಷಿಸಲು ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಲಲಿತ ಪಂಚಮಿ, ರಥೋತ್ಸವ ಕೂಡ ಅದ್ದೂರಿಯಾಗಿ ನಡೆಯುತ್ತದೆ.

ದೇವಾಲಯದಲ್ಲಿ ಪ್ರತಿದಿನವೂ ಪ್ರಾಚೀನ ಪದ್ಧತಿಯ ಪ್ರಕಾರ ಪೂಜಾ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಬೆಳಗಿನ ಅಭಿಷೇಕ ಹಾಗೂ ಅಲಂಕಾರ: ಮುಂಜಾನೆ 5 ಗಂಟೆಗೆ ದೇವಿಯ ಅಭಿಷೇಕ ಮತ್ತು ಅಲಂಕಾರ ನಡೆಯುತ್ತದೆ.

ಮಧ್ಯಾಹ್ನ ದೇವಿಗೆ ವಿಶೇಷ ಆಹಾರ ನೈವೇದ್ಯ ಅರ್ಪಿಸಲಾಗುತ್ತದೆ.

ಸಂಜೆಯ ಮಹಾಪೂಜೆ ಹಾಗೂ ಆರತಿ: ಮಂಗಳಧ್ವನಿ, ಭಜನೆ ಮತ್ತು ಧೂಪದ ಬೆಳಕಿನಲ್ಲಿ ಭಕ್ತಿಯ ಉತ್ಸಾಹದಿಂದ ನಡೆಯುತ್ತದೆ.

kolhapur 4

ಪ್ರವಾಸಿಗರಿಗೆ ಉಪಯುಕ್ತ ಮಾಹಿತಿ

ವಿಳಾಸ: ಮಹಾಲಕ್ಷ್ಮಿ ದೇವಾಲಯ, ನ್ಯೂ ಪ್ಯಾಲೆಸ್ ರಸ್ತೆ, ಕೊಲ್ಹಾಪುರ, ಮಹಾರಾಷ್ಟ್ರ – 416012

ದೇವಾಲಯದ ಸಮಯ: ಪ್ರತಿದಿನ ಬೆಳಗ್ಗೆ 4:30 ರಿಂದ ರಾತ್ರಿ 10 ಗಂಟೆವರೆಗೆ ತೆರೆದಿರುತ್ತದೆ.

ಸಂದರ್ಶಿಸಲು ಉತ್ತಮ ಸಮಯ: ಅಕ್ಟೋಬರ್ – ಫೆಬ್ರವರಿ

ಸಲಹೆಗಳು

ದೇವಾಲಯ ಪ್ರವೇಶಕ್ಕೆ ಸಮರ್ಪಕ ಭೂಷಣ ಧರಿಸಿ.

ಬೆಳಗ್ಗೆ ವೇಳೆಯಲ್ಲಿ ನಿಶ್ಚಲ ದರ್ಶನ ಸಾಧ್ಯ.

ಗರ್ಭಗುಡಿಯಲ್ಲಿ ಫೋನ್/ಕ್ಯಾಮೆರಾ ಬಳಕೆ ನಿರ್ಬಂಧಿತ.

ಉತ್ಸವ ದಿನಗಳಲ್ಲಿ ಭಾರೀ ಜನಸಂದಣಿ ಇರಬಹುದೆಂದು ಮುಂಚಿತ ಯೋಜನೆ ಮಾಡಿ.

ಸಾಮಾನ್ಯವಾಗಿ ದೇವಾಲಯವು ಬೆಳಿಗ್ಗೆ 5:00 ರಿಂದ ರಾತ್ರಿ 10:00 ರವರೆಗೆ ತೆರೆದಿರುತ್ತದೆ.

ವಸ್ತ್ರ ಸಂಹಿತೆ: ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಲು ಸಾಂಪ್ರದಾಯಿಕ ಮತ್ತು ಸಭ್ಯ ಉಡುಪುಗಳನ್ನು ಧರಿಸುವುದು ಸೂಕ್ತ.

ದಾರಿ ಹೇಗೆ?

ಕೊಲ್ಹಾಪುರವು ರೈಲು, ರಸ್ತೆ ಮತ್ತು ವಿಮಾನದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಕೊಲ್ಹಾಪುರ ರೈಲ್ವೆ ನಿಲ್ದಾಣದಿಂದ ದೇವಾಲಯಕ್ಕೆ ಸುಲಭವಾಗಿ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ